ಮಂಗಳೂರು:"ಡಾ. ಅಮ್ಮೆಂಬಳ ಬಾಳಪ್ಪ ರಸ್ತೆ" ನಾಮಕರಣಫಲಕ ಅನಾವರಣಗೊಳಿಸುವ ಮೂಲಕ ಮಂಗಳೂರಿಗೆ ಇವತ್ತು ಐತಿಹಾಸಿಕ ದಿನವಾಗಿದೆ, ಬ್ರಿಟಿಷರ ದಾಸ್ಯದಿಂದ ದೇಶವನ್ನು ಬೆರ್ಪಡಿಸಿ ಎಲ್ಲರನ್ನು ಒಗ್ಗೂಡಿಸಿದ ಸ್ವತಂತ್ರಯೋದ ಡಾ ಬಾಳಪ್ಪರ ಜೀವನ ನಮಗೆಲ್ಲ ಆದರ್ಶ ಹಾಗೂ ಪ್ರೇರಣೆ ಎಂದು ಮಂಗಳೂರು ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.
ಅವರು ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ (ರಿ.) ಪೊಲೀಸ್ ಲೇನ್, ಮಂಗಳೂರು ಇವರ ನೇತೃತ್ವದಲ್ಲಿ ಆ. 10ರಂದು ನಗರದ ಸೆಂಟ್ರಲ್ ರೈಲ್ವೆ ರಸ್ತೆಗೆ "ಡಾ. ಅಮ್ಮೆಂಬಳ ಬಾಳಪ್ಪ ರಸ್ತೆ"ಎಂದು ನಾಮಕರಣ ಫಲಕ ಅನಾವರಣ ಮಾಡಿ ಮಾತನಾಡಿರು.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್ ಮಾತನಾಡಿ,ಸ್ವತಂತ್ರ ಬಂದು 77ವರ್ಷವಾದರೂ ಡಾ ಬಾಳಪ್ಪರಂತಹ ಸ್ವತಂತ್ರ ಯೋಧರ ಹೆಸರು ಎಲ್ಲೋ ಪ್ರಸ್ತಾಪವಾಗದೆ ಇರುವುದು ಬೇಸರದ ಸಂಗತಿ.ಈ ಸಂದರ್ಭದಲ್ಲಿ ಮಂಗಳೂರಿನ ಹೃದಯಭಾಗದಲ್ಲಿ ತುಳುನಾಡಿನ ಕುವರ ಡಾ ಬಾಳಪ್ಪರ ಹೆಸರನ್ನು ರಸ್ತೆಗೆ ಇಡುವ ಮೂಲಕ ಮುಂದಿನ ತಲೆಮಾರಿಗೆ ಡಾ ಬಾಳಪ್ಪರ ಜೀವನ ಸಾಧನೆಯ ಬಗ್ಗೆ ನೆನಪಿಸುವ ಕಾರ್ಯವಾಗಿದೆ, ಇದೊಂದು ಅರ್ಥಪೂರ್ಣ ಹಾಗೂ ನಮ್ಮೆಲ್ಲರಿಗೆ ಹೆಮ್ಮೆಯ ಕ್ಷಣ ಎಂದು ಹೇಳಿದರು.
ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ ಸಮಾಜದಲ್ಲಿ ಶೋಷಿತರ, ದುರ್ಬಲರ ಅವಕಾಶವಂಚಿತರ ಗೇಣಿದಾರರ ಪರ ಧ್ವನಿಯಾಗಿ ಹೋರಾಟ ಮಾಡಿದಂತ ದೀಮಂತ ನಾಯಕ ಡಾ ಬಾಳಪ್ಪರ ನಾಮಕರಣ ಫಲಕ ಅನಾವರಣ ಮಾಡಿದ್ದು ಬಂಟ್ವಾಳದ ಜನತೆಗೆ ಸಂದ ಗೌರವ ಎಂದರು,
ಈ ಸಂದರ್ಭದಲ್ಲಿ ದ ಕ
ಜಿಲ್ಲಾ ಕುಲಾಲ ಕುಂಬಾರರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಮಾತನಾಡಿ ಮುಂದಿನ ದಿನಗಳಲ್ಲಿ ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್ ಗೆ ಕೂಡ ಡಾ ಅಮ್ಮೆಬಳ ಬಾಳಪ್ಪರ ಹೆಸರನ್ನು ಇಡುವಂತೆ ಜನ ಪ್ರತಿನಿಧಿಗಳಿಗೆ ಮನವಿ ಮಾಡಿದರು.
ಡಾ ಬಾಳಪ್ಪ ರಸ್ತೆ ನಾಮಕರಣದ ಅನುಮತಿಗಾಗಿ ಸರಕಾರ ಮಟ್ಟದಲ್ಲಿ ಪ್ರಯತ್ನಿಸಿದ ಶಾಸಕ ವೇದವ್ಯಾಸ ಕಾಮತ್ ಹಾಗೂ ಮಾಜಿ ಮೇಯರ್ ದಿವಾಕರ ಪಾಂಡೇಶ್ವರ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಂಗೇಶ್ ಮುಖಂಡ ಇನಾಯತ್ ಆಲಿ, ಜಿಲ್ಲಾ ಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ,ನಿವೃತ್ತ ಕಮಂಡೆಂಟ್ ಚಂದಪ್ಪ ಮೂಲ್ಯ, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಮಾಜಿ ಕಾರ್ಪೋರೇಟರ್ ರೂಪ ಡಿ ಬಂಗೇರ,ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಅಧ್ಯಕ್ಷ ಸುಂದರ ಕುಲಾಲ್, ಪೊಲೀಸ್ ಲೇನ್ ಶ್ರೀ ದೇವಿ ದೇವಸ್ಥಾನದ ಅಧ್ಯಕ್ಷ ಸದಾಶಿವ ಕುಲಾಲ್,ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುರೇಶ ಕುಲಾಲ, ಉಪಾಧ್ಯಕ್ಷ ಜನಾರ್ದನ ಬೊಂಡಲ,ಶ್ರೀ ವೀರನಾರಾಯಣ ಸೇವಾ ಸಮಿತಿಯ ಅಧ್ಯಕ್ಷ ಪ್ರೇಮಾನಂದ ಕುಲಾಲ್, ಮತ್ತಿತರರು ಉಪಸ್ಥಿತರಿದ್ದರು.
ನವೀನ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅಭಿನಂದನಾ ಸಮಾರಂಭ ಹಾಗೂ ಸನಾತನ ನಾಟ್ಯಲಯ ಮಂಗಳೂರು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.















