ಬಂಟ್ವಾಳ : ಶ್ರಮದಾನದ ಮೂಲಕ ಹಾಗೂ ಎಲ್ಲರ ಸಹಕಾರದದಿಂದ ಕುಂಭ ಕುಠೀರ ನಿರ್ಮಾಣ ಮಾಡಿರುವುದು ತುಂಬಾ ಸಂತೋಷ. ಹೀಗೆ ಬಡತನದಲ್ಲಿರುವ ಕುಟುಂಬಗಳಿಗೆ ಮುಂದೆಯೂ ಸಹಕಾರ ಸಿಗುವಂತಾಗಲಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ತಿಳಿಸಿದರು.
ಅವರು ಬಂಟ್ವಾಳ ತಾಲೂಕು ಕಾವಳ ಮೂಡೂರು ಗ್ರಾಮದ ಕಲ್ಮಂಜ ಬಳಿಯ ಕಮಲರವರಿಗೆ ವಗ್ಗ ಕುಲಾಲ ಸಮಾಜ ಸೇವಾ ಸಂಘದ ಸಹಭಾಗಿತ್ವದಲ್ಲಿ ವಿವಿಧ ಸಂಘಟನೆಗಳ ಮೂಲಕ ನಿರ್ಮಾಣವಾದ ಕುಂಭ ಕುಠೀರದ ಗೃಹಪ್ರವೇಶಕ್ಕೆ ಆಗಮಿಸಿ ಶುಭ ಹಾರೈಸಿದರು.
ಇದೇ ಸಂದರ್ಭ ನಿರ್ಮಾಣದ ಮೂಲ ಕಾರಣರಾದ ವಗ್ಗ ಕುಲಾಲ ಸಂಘದ ಸ್ಥಾಪನಾ ಸಮಿತಿಯ ಸದಸ್ಯರಾದ ಸದಾಶಿವ ವಗ್ಗ ಮತ್ತು ನಾರಾಯಣ ಇಜ್ಜದೋಡಿರವರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ರಮಾನಾಥ ರೈ, ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಅಣ್ಣಯ್ಯ ಕುಲಾಲ್, ವಗ್ಗ ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಪುರುಷೋತ್ತಮ ಕುಲಾಲ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ
ಪದ್ಮಶೇಖರ ಜೈನ್, ತುಂಗಪ್ಪ ಬಂಗೇರ, ಕುಲಾಲ ಯುವ ವೇದಿಕೆ ಜಿಲ್ಲಾಧ್ಯಕ್ಷ ಸುಕುಮಾರ ಬಂಟ್ವಾಳ ಶುಭಹಾರೈಸಿದರು.
ಮನೆ ನಿರ್ಮಾಣಕ್ಕಾಗಿ ಸಹಕಾರ ನೀಡಿದ ಉತ್ಸಾಹಿ ತರುಣ ವೃಂದ ವಗ್ಗ, ಓಂಕಾರ ಫ್ರೆಂಡ್ಸ್ ಮಧ್ವ, ಜೇಸಿಐ ಬಂಟ್ವಾಳ, ವಿಶ್ವ ಹಿಂದೂ ಪರಿಷತ್ ಭಜರಂಗದಳ ಸಿಂತಣಿಕಟ್ಟೆ-ಕುಂಟಾಲ್ಪಲ್ಕೆ, ವಗ್ಗ ಕುಲಾಲ ಸಂಘ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ, ಬಂಟ್ವಾಳ ಕುಲಾಲ ಯುವವೇದಿಕೆ, ಸಿದ್ದಕಟ್ಟೆ ಕುಲಾಲ ಸಂಘ, ಪುಟ್ಟಣ್ಣ ಕುಲಾಲ ಪ್ರತಿಷ್ಠಾನ ಪಡೀಲ್, ನಂದಾದೀಪ ಮಂಗಳೂರು ಮತ್ತು ಸಿದ್ದಕಟ್ಟೆ ಕುಲಾಲ ಯುವವೇದಿಕೆ ಮತ್ತು ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.















