ಮೊಡಂಕಾಪು: ಕಾರ್ಮೆಲ್ ಪ್ರೌಢಶಾಲೆ ಶಿಕ್ಷಕ ರೋಷನ್ ಪಿಂಟೋ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ.

Coastal Bulletin
ಮೊಡಂಕಾಪು: ಕಾರ್ಮೆಲ್ ಪ್ರೌಢಶಾಲೆ ಶಿಕ್ಷಕ ರೋಷನ್ ಪಿಂಟೋ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ.

ಬಂಟ್ವಾಳ: ಬಂಟ್ವಾಳ ತಾಲೂಕಿನ ಮೊಡಂಕಾಪುವಿನ ಕಾರ್ಮೆಲ್ ಬಾಲಿಕೆಯರ ಪ್ರೌಢಶಾಲೆಯ ಶಿಕ್ಷಕ ರೋಷನ್ ಅಲೆಕ್ಸಾಂಡರ್ ಪಿಂಟೋ ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪರಿಸರ ಸ್ನೇಹಿ ಚಿಂತನೆ, ವೈಜ್ಞಾನಿಕ ವಿಷಯಗಳಲ್ಲಿ ವಿದ್ಯಾರ್ಥಿಗಳನ್ನು ತಯಾರುಗೊಳಿಸುವಿಕೆ ಹಾಗೂ ಅನೇಕ ವಿಜ್ಞಾನ ಕಾರ್ಯಾಗಾರ, ಸಮಾವೇಶಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವಿಕೆಯ ಮೂಲಕ ಗಮನ ಸೆಳೆದಿರುವ ಅವರು, ತನ್ನ ವಿದ್ಯಾರ್ಥಿಗಳಿಗೆ ನೀರಿಂಗಿಸುವ ಜಾಗೃತಿಯನ್ನು ಹಲವು ವರ್ಷಗಳಿಂದ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಕಾರ್ಮೆಲ್ ಶಾಲೆಯ ವಿದ್ಯಾರ್ಥಿಗಳು ಕುಡಿಯುವ ನೀರು ಸಂರಕ್ಷಣೆಯ ಮಹತ್ವವನ್ನು ಸಾರುವ ಜಲಾಂದೋಲನ ಪ್ರಕ್ರಿಯೆಗಳು, ಬೇಸಗೆಯಲ್ಲಿ ಪಕ್ಷಿಗಳಿಗೆ ನೀರಿಡುವ ಕುರಿತು ಜಾಗೃತಿ, ಸಾರ್ವಜನಿಕರಿಗೆ ನೀರಿನ ಮಹತ್ವವನ್ನು ಅರಿವು ಮೂಡಿಸುವಂತೆ ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸುವ ರೋಷನ್ ಪಿಂಟೊ ಅವರ ಕೆಲಸಗಳು ಬಹುಮನ್ನಣೆಗೆ ಪಾತ್ರವಾಗಿದ್ದು, ಹಲವು ಬಾರಿ ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದವು.

ರೋಷನ್ ಪಿಂಟೋ ವಿಶೇಷತೆ:

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸುವ ವಿಜ್ಞಾನ ವಸ್ತು ಪ್ರದರ್ಶನದಲ್ಲಿ 20 ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ದಕ್ಷಿಣ ಭಾರತ ಮಟ್ಟದ ವಿಜ್ಞಾನ ಮೇಳದಲ್ಲಿ 10 ಬಾರಿ ಆಯ್ಕೆಗೊಂಡು ಬಹುಮಾನಗಳನ್ನು ಪಡೆದಿರುತ್ತಾರೆ.

ಜವಾಹರಲಾಲ್ ನೆಹರು ರಾಷ್ಟ್ರೀಯ ವಿಜ್ಞಾನ ಗಣಿತ ಮತ್ತು ಪರಿಸರ ವಸ್ತು ಪ್ರದರ್ಶನದಲ್ಲಿ 2  ಬಾರಿ  ಆಯ್ಕೆಗೊಂಡಿರುತ್ತಾರೆ. ಇನ್ಸ್ಪೈರ್ ಅವಾರ್ಡ್ ನಲ್ಲಿ 4 ಬಾರಿ ರಾಜ್ಯಮಟ್ಟವನ್ನು ಹಾಗೂ 1  ಬಾರಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸುತ್ತಾರೆ. ಇಂಡಿಯನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಫೇರ್ ನಲ್ಲಿ 6 ಬಾರಿ ಪದಕಗಳನ್ನು ಗಳಿಸಿರುತ್ತಾರೆ.

ಅಗಸ್ತ್ಯ ಅಂತರಾಷ್ಟ್ರೀಯ ಫೌಂಡೇಶನ್ ನಡೆಸುವ ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ     6  ಬಾರಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ. ಶೆಲ್ ಎನ್ ಎಕ್ಸ್ ಪ್ಲೋರರ್ ಆಯೋಜಿಸಿದ ರಾಷ್ಟ್ರಮಟ್ಟದ

ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. 2 ಬಾರಿ ರಾಜ್ಯಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.

ಪ್ರೌಢಶಾಲೆ ವಿದ್ಯಾರ್ಥಿಗಳು, ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಾಗಾರ ನಡೆಸಿರುವ ಅವರು, ವಿಜ್ಞಾನದ ಸರಳ ಪ್ರಯೋಗಗಳ ಕುರಿತು ಪ್ರಾತ್ಯಕ್ಷಿಕೆ ನೀಡುವುದರಲ್ಲಿ ಮುಂಚೂಣಿಯಲ್ಲಿದ್ದಾರೆ.

ಶಾಲೆಯಲ್ಲಿ ಹಸಿರು ಭವಿಷ್ಯ ಎಂಬ ಪರಿಸರ ಸಂಘದ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳ ಮೂಲಕ ಪರಿಸರ ಪ್ರಜ್ಞೆಯನ್ನು ಬೆಳೆಸಿದ್ದು,  ಪ್ಲಾಸ್ಟಿಕ್ ಚೀಲದ ನಿಷೇಧ ಹಾಗೂ ಬಟ್ಟೆ ಚೀಲಗಳ ವಿತರಣೆ,  ಮಳೆ ನೀರನ್ನು ಇಂಗಿಸಲು ಸುಮಾರು 1007 ಕ್ಕಿಂತ ಹೆಚ್ಚು ಇಂಗು ಗುಂಡಿಗಳ ನಿರ್ಮಾಣ., ಚೀಂವ್, ಚೀಂವ್ ಅಭಿಯಾನ ಮೂಲಕ ಪ್ರತಿವರ್ಷ ಪಕ್ಷಿಗಳಿಗೆ ಆಹಾರ ಮತ್ತು ನೀರುಣಿಸುವ ಘಟಕಗಳ ನಿರ್ಮಾಣ,  ನನ್ನ ಉಸಿರಿಗೆ ನನ್ನ ಹಸಿರು ವೃಕ್ಷಾಂದೋಲನ  ಕಾರ್ಯಕ್ರಮ., ಸೀಡ್ ಪೇಪರ್ ಪೆನ್ ವಿದ್ಯಾರ್ಥಿಗಳಿಂದ ತಯಾರಿಸಿ ಬಳಕೆ , ಇಂದು ನಾವೇ ಬದಲಾವಣೆ ಆರಂಭಿಸೋಣ ಪ್ಲಾಸ್ಟಿಕ್ ತ್ಯಜಿಸೋಣ ಅಭಿಯಾನದ ಮೂಲಕ ಸುಮಾರು 5000 ಪೇಪರ್ ಬ್ಯಾಗ್ ಗಳನ್ನು ತಯಾರಿಸಿ ಉಚಿತವಾಗಿ ವರ್ತಕರಿಗೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ವಿಜ್ಞಾನ ವಿಚಾರ ಸಂಕಿರಣದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದ ಅವರು, ಇಂಡಿಯಾ ಇಂಟರ್ನ್ಯಾಷನಲ್ ಸೈನ್ಸ್ ಫೆಸ್ಟಿವಲ್ನ ಅಂಗವಾಗಿ ಆಯೋಜಿಸಲಾದ ರಾಷ್ಟ್ರಮಟ್ಟದ ವಿಜ್ಞಾನ ಪ್ರಯೋಗಗಳ ವಿಡಿಯೋ ತಯಾರಿಕಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ  ಪಡೆದಿದ್ದಾರೆ. ವಿಜ್ಞಾನ ಪ್ರದರ್ಶನದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ದಕ್ಷಿಣ ಭಾರತ ವಿಜ್ಞಾನ ಮೇಳದಲ್ಲಿ ವಿಶೇಷ ಬಹುಮಾನ ಪಡೆದಿದ್ದಾರೆ.

Leave a Comment