ಬಂಟ್ವಾಳ: ಫರಂಗಿಪೇಟೆ ಅರ್ಕುಳ ಶ್ರೀರಾಮ ವಿದ್ಯಾಸಂಸ್ಥೆ ಹಾಗೂ ಫರಂಗಿಪೇಟೆ ರೋಟರಿ ಕ್ಲಬ್ ಸಹಯೋಗದೊಂದಿಗೆ ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಶಾಲೆಯ ಜಯಪದ್ಮಾ ಸಭಾಂಗಣದಲ್ಲಿ ಸಮ್ಮಾನಿಸಲಾಯಿತು.
ಸಮ್ಮಾನ ಸ್ವೀಕರಿಸಿದ ಹರೇಕಳ ಹಾಜಬ್ಬ ಅವರು ಎಲ್ಲರಿಗೂ ಕೃತಜ್ಞತೆ ಅರ್ಪಿಸಿ, ತನ್ನಂತ ಸಾಮಾನ್ಯ ವ್ಯಕ್ತಿಗೂ ದೇಶದ ಉನ್ನತ ಗೌರವ ಪ್ರದ್ಮಶ್ರೀ ಲಭಿಸಿರುವುದಕ್ಕೆ ನಿಮ್ಮಂತವರು ತೋರಿದ ಪ್ರೀತಿ ವಿಶ್ವಾಸವೇ ಕಾರಣ. ಮಾಧ್ಯಮಗಳು ತನ್ನನ್ನು ಗುರುತಿಸಿ ಗೌರವ ಸಿಗುವಂತೆ ಮಾಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಎ.ಕೆ.ಜಯರಾಮ ಶೇಖ ಅವರು ಮಾತನಾಡಿ, ಕಳೆದ 30 ವರ್ಷಗಳಿಂದ ತಾನು ಹಾಜಬ್ಬ ಅವರನ್ನು ಬಹಳ ಹತ್ತಿರದಿಂದ ಕಂಡಿದ್ದು, ಅವರ ವ್ಯಕ್ತಿತ್ವ ಯಾವುದೇ ಬದಲಾವಣೆಯಾಗಿಲ್ಲ. ಅವರು ಕಿತ್ತಳೆ ಮಾರುವ ಸಂದರ್ಭದಲ್ಲಿ ಕಿತ್ತಳೆಯನ್ನು ಖರೀಸಿದ ನೆನಪು ಅವರಿಗೂ ಇದೆ, ನನಿಗೂ ಇದೆ. ಅದೇ ಸರಳ ಹಾಜಬ್ಬರನ್ನು ಈಗಲೂ ಕಾಣುತ್ತಿರುವುದೇ ಹೆಮ್ಮೆ ಎಂದರು.
ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ಅವರು ಹಾಜಬ್ಬ ಅವರ ಸಾಧನೆಯನ್ನು ವಿವರಿಸಿದರು. ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ರಮೇಶ್ ತುಂಬೆ, ಪುರುಷೋತ್ತಮ ಭಂಡಾರಿ ಅವರು ಹಾಜಬ್ಬ ಅವರ ಅಭಿನಂದನಾ ಭಾಷಣ ಮಾಡಿದರು.
ವೇದಿಕೆಯಲ್ಲಿ
ರೋಟರಿ ಕ್ಲಬ್ ಅಧ್ಯಕ್ಷ ಸುರೇಂದ್ರ ಕಂಬಳಿ, ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ಜಿ.ಪಂ.ಮಾಜಿ ಸದಸ್ಯ ರವೀಂದ್ರ ಕಂಬಳಿ, ಸಂಚಾಲಕ ಗೋವಿಂದ ಶೆಣೈ, ಯಕ್ಷಗಾನ ಸಂಘಟಕ ಭಾಸ್ಕರ ರೈ ಕುಕ್ಕುವಳ್ಳಿ, ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ, ಗ್ರಾ.ಪಂ.ಮಾಜಿ ಅಧ್ಯಕ್ಷ ಅಬ್ದುಲ್ ಸತ್ತಾರ್, ಪ್ರಮುಖರಾದ ಯೂಸುಫ್ ಆಲಂಕಾರ್ , ನಾರಾಯಣ ಹೆಗ್ಡೆ, ದಾಮೋದರ್ ಶೆಣೈ, ಸುಂದರ ಶೆಟ್ಟಿ, ರಮೇಶ್ ಶೆಟ್ಟಿ, ಝಫ್ರುಲ್ ಒಡೆಯರ್ , ಮಾಧವ ನಾಯ್ಕ ಅಡ್ಯಾರ್ , ನೋರ್ಬಟ್ ಡಿಸೋಜಾ , ರೋಟರಿ ಕ್ಲಬ್ ಫರಂಗಿಪೇಟೆ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೊಟ್ಟಿಂಜ ಮೊದಲಾದವರು ಉಪಸ್ಥಿತರಿದ್ದರು .
ಸಂಸ್ಕಾರ ಭಾರತಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ತಾರಾನಾಥ ಕೊಟ್ಟಾರಿ ಅವರು ಸಮ್ಮಾನ ಪತ್ರ ವಾಚಿಸಿದರು. ನಿವೃತ್ತ ಮುಖ್ಯಶಿಕ್ಷಕ ದೇವದಾಸ್ ಕೆ.ಆರ್.ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸುಮಲತಾ ಸುರೇಂದ್ರ ಕಂಬಳಿ ವಂದಿಸಿದರು.














