ನವಜಾತ ಶಿಶು ಮಾರಾಟ,ಬಾಡಿಗೆ ತಾಯ್ತನ,ಅಂಡಾಣು ಮಾರಾಟ ಜಾಲ ಪತ್ತೆ- 8 ಮಂದಿ ಬಂಧನ,ಹಲವು ರಾಜ್ಯಗಳ ನಂಟು ಸಾಧ್ಯತೆ.

Coastal Bulletin
ನವಜಾತ ಶಿಶು ಮಾರಾಟ,ಬಾಡಿಗೆ ತಾಯ್ತನ,ಅಂಡಾಣು ಮಾರಾಟ ಜಾಲ ಪತ್ತೆ- 8 ಮಂದಿ ಬಂಧನ,ಹಲವು ರಾಜ್ಯಗಳ ನಂಟು ಸಾಧ್ಯತೆ.

ಬೆಂಗಳೂರು: ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಬಯಲಿಗೆಳೆದಿರುವ ನವಜಾತ ಶಿಶು ಮಾರಾಟ ಜಾಲವು ಅಕ್ರಮ ಬಾಡಿಗೆ ತಾಯ್ತನ, ಅಂಡಾಣು ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿತ್ತು ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ. ಜಾಲದ ಕಿಂಗ್‌ಪಿನ್‌ಗಳಾದ ಕಣ್ಣನ್‌ ರಾಮಸ್ವಾಮಿ, ಶರಣ್ಯ, ಮಹಾಲಕ್ಷ್ಮಿ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿರುವ ಸಿಸಿಬಿ ತನಿಖೆಯಿಂದ ಈ ಮಾಹಿತಿ ಗೊತ್ತಾಗಿದೆ.

ಹಲವು ವರ್ಷಗಳಿಂದ ಬಾಡಿಗೆ ತಾಯ್ತನ, ಅಂಡಾಣು ಮಾರಾಟ, ಮಕ್ಕಳ ಮಾರಾಟ ದಂಧೆಯಲ್ಲಿ ಸಕ್ರಿಯವಾಗಿರುವ ಆರೋಪಿಗಳ ತಂಡ, ಬೆಂಗಳೂರು, ತಮಿಳುನಾಡಿನಲ್ಲಿಇದುವರೆಗೂ 60ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವ ಶಂಕೆಯಿದೆ. ಅಷ್ಟೇ ಅಲ್ಲದೆ, ಹತ್ತು ಮಕ್ಕಳನ್ನು ಲಕ್ಷಾಂತರ ರೂ.ಗಳಿಗೆ ಈಗಾಗಲೇ ಮಾರಾಟ ಮಾಡಿರುವುದು ತನಿಖೆಯಲ್ಲಿ ಧೃಡಪಟ್ಟಿದೆ.

ಬಾಡಿಗೆ ತಾಯ್ತನಕ್ಕೆ 2 ಲಕ್ಷ ರೂ, ಅಂಡಾಣು ದಾನ ಮಾಡಿದವರಿಗೆ 25 ಸಾವಿರ ರೂ., ಹೆತ್ತ ಮಗುವನ್ನು ಮಾರಿದವರಿಗೆ ಮೂರು ಲಕ್ಷ ರೂ. ಫಿಕ್ಸ್‌ ಮಾಡಿದ್ದ ಆರೋಪಿಗಳ ತಂಡ, 9 ತಿಂಗಳ ಬಳಿಕ ಜನಿಸಿದ ಮಗುವನ್ನು ಶ್ರೀಮಂತರಿಗೆ 8ರಿಂದ 10 ಲಕ್ಷ ರೂ.ಗಳಿಗೆ ಮಾರಾಟ ಮಾಡುತ್ತಿತ್ತು. ಈ ದಂಧೆಯಲ್ಲಿತಮಿಳುನಾಡಿನ ಮೂರು ಐವಿಎಫ್‌ ಆಸ್ಪತ್ರೆಗಳು, ಕೆಲ ವೈದ್ಯರು ಶಾಮೀಲಾಗಿರುವ ಶಂಕೆಯಿದ್ದು, ಈ ಜಾಲ ತಮಿಳುನಾಡು, ಆಂಧ್ರಪ್ರದೇಶ, ಕೇರಳಕ್ಕೂ ವಿಸ್ತರಿಸಿರುವ ಸಾಧ್ಯತೆಯಿದೆ.

ಕಣ್ಣನ್‌ ಮತ್ತು ಏಳು ಮಂದಿ ಆರೋಪಿಗಳು ತಮಿಳುನಾಡಿನ ಈರೋಡ್‌ ಮೂಲದವರಾಗಿದ್ದಾರೆ. ಬಂಧಿತ ಮಹಿಳೆಯರು ಈ ಹಿಂದೆ ಅಂಡಾಣು ಮಾರಾಟ ಮಾಡಿ ಹಣ ಸಂಪಾದನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು

ಬಂದಿದ್ದು, ಬಳಿಕ ಅವರೇ ಈ ಜಾಲದ ಏಜೆಂಟ್‌ಗಳಾಗಿ ಪರಿವರ್ತಿತರಾಗಿದ್ದರು. ಮಹಾಲಕ್ಷ್ಮೀ  ಸೇರಿದಂತೆ ಪ್ರತಿಯೊಬ್ಬರೂ ತಮಗೆ ಮಗು ಖರೀದಿಗೆ ಬರುವ ಬೇಡಿಕೆ ಆಧರಿಸಿ ಒಟ್ಟಾಗಿ ಕೆಲಸ ಮಾಡುತ್ತಿದ್ದರು.


ಮೊದಲಿಗೆ ಬಡತನದ ಕಾರಣಕ್ಕೆ ಮಗು ಹೆತ್ತು ಮಾರಾಟ ಮಾಡುವ, ಬಾಡಿಗೆ ತಾಯ್ತನಕ್ಕೆ ಒಪ್ಪುವ ಬಡವರ್ಗದ ಹೆಣ್ಣು ಮಕ್ಕಳನ್ನು ಸಂಪರ್ಕಿಸಿ ಅವರಿಗೆ ಎರಡರಿಂದ 3 ಲಕ್ಷ ರೂ.ಲಕ್ಷ ರೂ.ಗಳಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದರು. ಮಗು ಹೆತ್ತು ಕೊಟ್ಟ ಬಳಿಕ ಹಣ ಕೊಟ್ಟು ಖರೀದಿ ಮಾಡಿ 8ರಿಂದ 10 ಲಕ್ಷ ರೂ.ಗಳಿಗೆ ಮಗು ಪಡೆದು ಮಕ್ಕಳಿಲ್ಲದ ಶ್ರೀಮಂತ ದಂಪತಿಗೆ ಮಾರುತ್ತಿದ್ದರು. ಬಂದ ಹಣವನ್ನು ಎಲ್ಲರೂ ಹಂಚಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರ ಪೈಕಿ ಮಗುವಿನ ತಾಯಿ ಮುರುಗೇಶ್ವರಿ, ಕಣ್ಣನ್‌ ರಾಮಸ್ವಾಮಿ, ಹೇಮಲತಾ, ಶರಣ್ಯರನ್ನು ಬಂಧಿಸಿ ಪ್ರಾಥಮಿಕ ವಿಚಾರಣೆ ನಡೆಸಿ ಜೈಲಿಗೆ ಕಳುಹಿಸಲಾಗಿದೆ. ಆರೋಪಿಗಳ ನೀಡಿದ್ದ ಸುಳಿವಿನ ಮೇರೆಗೆ ದಂಧೆಯ ಸೂತ್ರಧಾರಿಗಳು ಎನ್ನಲಾದ ಮಹಾಲಕ್ಷ್ಮಿ, ಸುಹಾಸಿನಿ, ರಾಧ, ಗೋಮತಿ ಬಂಧಿಸಿ ಹೆಚ್ಚಿನ ವಿಚಾರಣೆ ಸಲುವಾಗಿ 12 ದಿನ ಕಸ್ಟಡಿಗೆ ಪಡೆಯಲಾಗಿದೆ.

Leave a Comment