ಬೆಂಗಳೂರು: ಕಳೆದ ತಿಂಗಳಷ್ಟೇ ಐಟಿ ದಾಳಿಗೆ ಒಳಗಾಗಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಆರ್.ಅಂಬಿಕಾಪತಿ (70) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಂಬಿಕಾಪತಿ ಅವರಿಗೆ ಸಂಜೆ 6.30ರ ಸುಮಾರಿಗೆ ಹೃದಯಘಾತವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಎರಡು ವರ್ಷದ ಹಿಂದೆ ಅವರಿಗೆ ಕಿಡ್ನಿ ಬದಲಾವಣೆ ಮಾಡಲಾಗಿತ್ತು. ಅಲ್ಲದೇ, ಇತ್ತೀಚಿಗೆ ಫೈಲ್ಸ್ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ವಾರವಷ್ಟೇ ಲೇಸರ್ ಶಸ್ತ್ರಚಿಕಿತ್ಸೆ ಒಳಗಾಗಿದ್ದರು. ಹಲವು ಆರೋಗ್ಯ ಸಮಸ್ಯೆಗಳ ನಡುವೆ ಐಟಿ ದಾಳಿಯಿಂದಾಗಿ ಮಾನಸಿಕ ಖಿನ್ನತೆ ಒಳಗಾಗಿದ್ದರು ಎನ್ನಲಾಗಿದೆ. ಅಂಬಿಕಾಪತಿ ಅವರ ನಿಧನಕ್ಕೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸಂತಾಪ ಸೂಚಿಸಿದ್ದಾರೆ.ಕಳೆದ ತಿಂಗಳು ಅಂಬಿಕಾಪತಿ ಅವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅಂಬಿಕಾಪತಿ ಅವರ ಮನೆಯಲ್ಲಿ44 ಕೊಟಿ
ರೂ. ನಗದು ಪತ್ತೆಯಾಗಿತ್ತು. ಈ ಘಟನೆ ಬಳಿಕ ಮಾನಸಿಕ ಒತ್ತಡಕ್ಕೆ ಒಳಗಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಗುತ್ತಿಗೆದಾರಧಿರಾದ ಅಂಬಿಕಾಪತಿ, ಈ ಹಿಂದೆ ಬಿಜೆಪಿ ಸರಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದರು. ಅಲ್ಲದೆ, ಕೆಲ ರಾಜಕಾರಣಿಗಳ ವಿರುದ್ಧ ಕಮಿಷನ್ ದಂಧೆಯ ಬಾಂಬ್ ಸಿಡಿಸಿದ್ದರು. ತಮ್ಮ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಅಂಬಿಕಾಪತಿ ವಿರುದ್ಧ ಬಿಜೆಪಿ ಶಾಸಕ ಮುನಿರತ್ನ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದಲ್ಲಿ ವೈಯಾಲಿಕಾವಲ್ ಠಾಣೆ ಪೊಲೀಸರು ಅಂಬಿಕಾಪತಿ ಅವರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.














