ಬೆಂಗಳೂರು: ಇತ್ತೀಚೆಗೆ ರಚನೆಯಾದ ಕಾಂಗ್ರೆಸ್ ಸರಕಾರಕ್ಕೆ ಕಾವೇರಿ ಬರೆ ಬಿದ್ದಿದೆ. ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ರಾಜ್ಯಾದ್ಯಂತ ಆಕ್ರೋಶದ ಕಿಚ್ಚು ಭುಗಿಲೆದ್ದಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ನಾಳೆ ಬೆಂಗಳೂರು ಬಂದ್ಗೆ ಹಲವು ಸಂಘಟನೆಗಳು ಕರೆ ನೀಡಿವೆ. ಆದರೆ ಇನ್ನೂ ಅನೇಕ ಸಂಘಟನೆಗಳು ಶುಕ್ರವಾರ, ಅಂದರೆ ಸೆಪ್ಟೆಂಬರ್ 29ಕ್ಕೆ ಕರ್ನಾಟಕ ಬಂದ್ ಮಾಡಲು ಸಜ್ಜಾಗಿವೆ. ಹೀಗಾಗಿ ನಾಳಿನ ಬೆಂಗಳೂರು ಬಂದ್ ನಡೆಯುತ್ತೋ ಅಥವಾ ಪ್ರತಿಭಟನೆಗೆ ಮಾತ್ರ ಸೀಮಿತವಾಗುತ್ತೋ ತಿಳಿಯಬೇಕಿದೆ.
ವಾಟಾಳ್ ನಾಗರಾಜ್ vs ಕುರುಬೂರು ಶಾಂತಕುಮಾರ್ ಪ್ರತಿಷ್ಠೆಗೆ ಬಂದ್ ಬಡವಾಯ್ತಾ ಎಂಬ ಸಂಶಯ ಇದೀಗ ಕಾಡುತ್ತಿದೆ. ಕುರುಬೂರು ಶಾಂತಕುಮಾರ್ ಬಣದಿಂದ ನಾಳೆ ಪ್ರತಿಭಟನೆಗೆ ಮಾತ್ರ ಬಂದ್ ಸೀಮಿತವಾಗುವ ಸಾಧ್ಯತೆ ಇದೆ.
ಇನ್ನು ನಾಳೆ ಅಂದರೆ ಸೆ. 26 ಬೆಂಗಳೂರು ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದವರು, ಇದೀಗ ಬಂದ್ ವಾಪಾಸ್ ಪಡೆದಿದ್ದಾರೆ. ಇದರ ಬದಲು ಸೆ. 29ರಂದು ಕರ್ನಾಟಕ ಬಂದ್ ಗೆ ನೂರಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ.
ನಾಳಿನ ಬೆಂಗಳೂರು ಬಂದ್ಗೆ ಹಲವು ಸಂಘಟನೆಗಳು ಈಗಾಗಲೇ ಬೆಂಬಲ ಘೋಷಿಸಿವೆ. ಕಬ್ಬು ಬೆಳೆಗಾರ ಸಂಘ, ಆಮ್ ಆದ್ಮಿ ಪಾರ್ಟಿ, ಪೋಷಕರ ಸಮನ್ವಯ ಸಮಿತಿ, ಪೀಸ್ ಆಟೋ ಸಮಿತಿ, ಜಯ ಕರ್ನಾಟಕ ಸಂಘಟನೆ, ನಾರಾಯಣಸ್ವಾಮಿ ಆಟೋ ಸಂಘಟನೆ, ಬಿಎಂಟಿಸಿ ಸಾರಿಗೆ ಸಿಬ್ಬಂದಿ ಫೆಡರೇಷನ್ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿವೆ.
ನಾಳಿನ
ಬಂದ್ಗೆ ಹೋಟೆಲ್ ಮಾಲಿಕರ ಸಂಘ, ಓಲಾ - ಊಬರ್ ಚಾಲಕರ ಸಂಘಟನೆ, ಆದರ್ಶ ಆಟೋ ಚಾಲಕರ ಸಂಘ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ವಾಪಸ್ ಪಡೆದಿವೆ.
ಇನ್ನು ಕರವೇ ಪ್ರವೀಣ ಶೆಟ್ಟಿ ಬಣ, ಶಿವರಾಮೇಗೌಡ ಬಣ, ಕೆ ಆರ್ ಕುಮಾರ್ ಬಣ, ಕನ್ನಡ ಚಲನಚಿತ್ರವಾಣಿಜ್ಯ ಮಂಡಳಿ ಸೇರಿದಂತೆ ಪ್ರಮುಖ ಸಂಘಟನೆಗಳು ಸೆಪ್ಟೆಂಬರ್ 29ರ ಬಂದ್ಗೆ ಬೆಂಬಲ ಸೂಚಿಸಿವೆ.
ನಾಳಿನ ಬಂದ್ಗೆ ಬಿಎಂಟಿಸಿ ಬೆಂಬಲ ಘೋಷಿಸಿದೆ. ನಾವು ನಾಳಿನ ಬಂದ್ಗೆ ಬೆಂಬಲ ವಾಪಾಸ್ ಪಡೆಯಲ್ಲ, ನಾಳೆ ನಮ್ಮ ಸಿಬ್ಬಂದಿ ಬಸ್ ಘಟಕದಿಂದ ಹೊರತೆಗೆಯುವುದಿಲ್ಲ ಅಂತ ಬಿಎಂಟಿಸಿ ಸಾರಿಗೆ ಸಿಬ್ಬಂದಿ ಫೆಡರೇಷನ್ ಹೇಳಿದೆ.
ಇನ್ನು ಕೆಎಸ್ಆರ್ಟಿಸಿ ಎಂದಿನಂತೆ ಸಂಚಾರ ನಡೆಸಲಿದೆ ಅಂತ ಅನಂತ ಸುಬ್ಬರಾವ್ ಹೇಳಿದ್ದಾರೆ. ಬೆಂಗಳೂರು ಹೊರವಲಯ, ಅಗತ್ಯ ಬಿದ್ದರೆ ನಗರದೊಳಗೆ ಸಂಚಾರ ನಡೆಸಲಿದೆ ಅಂತ ಅನಂತ ಸುಬ್ಬರಾವ್ ಮಾಹಿತಿ ನೀಡಿದ್ದಾರೆ.















