Coastal Bulletin

ಬೆಂಗಳೂರು : ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಾಫಿಯಾ ಡಾನ್‌ ಹಾಗೂ ರಾಜಕಾರಣಿ ಅತೀಕ್‌ ಅಹ್ಮದ್‌ ಹಾಗೂ ಆತನ ಸಹೋದರ ಅಶ್ರಫ್‌ನನ್ನು ನಡು ರಸ್ತೆಯಲ್ಲಿ ಪೊಲೀಸ್‌ ಭದ್ರತೆಯಲ್ಲಿಯೇ ದುಷ್ಕರ್ಮಿಗಳು ಹೊಡೆದುಹಾಕಿದ್ದರು. ಆದರೆ, ಈ ವಿಚಾರದ ರಾಜಕೀಯ ಮಾತ್ರ ನಿಲ್ಲುತ್ತಿಲ್ಲ. ಬುಧವಾರವಷ್ಟೇ ಉತ್ತರ ಪ್ರದೇಶ ಪಾಲಿಕೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ರಾಜ್‌ಕುಮಾರ್‌ ಸಿಂಗ್‌, ಅತೀಕ್‌ ಅಹ್ಮದ್‌ಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಬೇಕು. ಆತ ಹುತಾತ್ಮ ಎಂದು ಹೇಳಿದ್ದಲ್ಲದೆ, ಆತನ ಸಮಾಧಿಯ ಮೇಲೆ ರಾಷ್ಟ್ರಧ್ವಜವನ್ನು ಹೊದೆಸಿ ಬಂದು ಸುದ್ದಿಯಾಗಿದ್ದರು. ಈ ನಡುವೆ ಕಾಂಗ್ರೆಸ್‌ ಪಕ್ಷ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬುಧವಾರ ತನ್ನ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಪ್ರಕಟ ಮಾಡಿದೆ. ಇದರಲ್ಲಿ ಇರುವ ಒಬ್ಬ ವ್ಯಕ್ತಿ, ಹಿಂದೊಮ್ಮೆ ಅತೀಕ್‌ ಅಹ್ಮದ್‌ ನನ್ನ ಸಹೋದರನಿದ್ದಂತೆ ಹೇಳಿದ್ದರು. ಮಾಫಿಯಾ ಡಾನ್‌ ವಿರುದ್ಧ ಮೃದುಧೋರಣೆ ಹೊಂದಿದ್ದ ಹಾಗೂ ಆತನೊಂದಿಗೆ ಚಿತ್ರಗಳನ್ನು ತೆಗೆಸಿಕೊಂಡಿದ್ದ ವ್ಯಕ್ತಿಯನ್ನು ಕಾಂಗ್ರೆಸ್‌ ಚುನಾವಣೆಗೆ ಸ್ಟಾರ್‌ ಪ್ರಚಾರಕನನ್ನಾಗಿ ನೇಮಕ ಮಾಡಿದ್ದು ಬಿಜೆಪಿಗೆ ಅಸ್ತ್ರ ಸಿಕ್ಕಂತಾಗಿದೆ. ಇದೇ ವಿಚಾರದಲ್ಲಿ ಬಿಜೆಪಿಯ ಹಿರಿಯ ನಾಯಕಿ ಶೋಭಾ ಕರಂದ್ಲಾಜೆ ಕಾಂಗ್ರೆಸ್‌ ಪಕ್ಷವನ್ನು ಟೀಕೆ ಮಾಡಿದ್ದಾರೆ.

ಕಾಂಗ್ರೆಸ್‌ಗೆ ಮೊದಲಿನಿಂದಲೂ ಮಾಫಿಯಾ ಜೊತೆ ಲಿಂಕ್‌ ಇದೆ. ಈಗ ಗ್ಯಾಂಗ್‌ಸ್ಟರ್‌ಗಳಾದ ಅತೀಕ್‌ ಅಹ್ಮದ್‌ ಹಾಗೂ ಆತನ ಸಹೋದರ ಅಶ್ರಫ್‌ ನನ್ನ ಸ್ನೇಹಿತರು ಎಂದಿದ್ದ ಇಮ್ರಾನ್‌ ಪ್ರತಾಪ್‌ಗರ್ಹಿಯನ್ನು ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಟಾರ್‌ ಪ್ರಚಾರಕನನ್ನಾಗಿ ನೇಮಕ ಮಾಡಿದೆ. ಇಮ್ರಾನ್‌

ಪ್ರತಾಪ್‌ಗರ್ಹಿ, ಅತೀಕ್‌ ನನ್ನ ಸಹೋದರ ಎಂದೇ ಹೇಳುತ್ತಿದ್ದ. ಇಂಥ ವ್ಯಕ್ತಿಯನ್ನು ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ಸ್ಟಾರ್‌ ಪ್ರಚಾರಕನನ್ನಾಗಿ ಪ್ರಕಟಿಸಿದೆ. ಕ್ರಿಮಿನಲ್‌ಗಳು ಹಾಗೂ ದೇಶದ್ರೋಹಿಗಳಿಗೆ ಕಾಂಗ್ರೆಸ್‌ ಬೆಂಬಲ ನೀಡುತ್ತಿದೆ ಎನ್ನುವುದು ಇದರಿಂದ ಗೊತ್ತಾಗುತ್ತಿದೆ' ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Leave a Comment