ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಯ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸಭೆ ನಡೆಸಿದರು. ಈ ವೇಳೆ ರಾಜ್ಯದ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಮಹತ್ವದ ಸುಧಾರಣೆ ಬಗ್ಗೆ ಸಚಿವರು ಮಹತ್ವದ ಘೋಷಣೆ ಮಾಡಿದ್ದಾರೆ.
ದೇಗುಲದ ಹುಂಡಿ ಹಣ ಅದೇ ದೇವಾಲಯದ ಅಭಿವೃದ್ಧಿಗಾಗಿ ಬಳಕೆ ಮಾಡಬೇಕು ಹಾಗೂ ಹಲವು ಹೊಸ ರೂಲ್ಸ್ ಜಾರಿಗೊಳಿಸಿದ್ದಾರೆ.
ಪ್ರಮುಖ ದೇಗುಲಗಳಲ್ಲಿ ಆನ್ಲೈನ್ ಸೇವೆಗಾಗಿ ಆ್ಯಪ್ ಶೀಘ್ರ ಬಿಡುಗಡೆ ಆಗಲಿದೆ. ಪೂಜೆ ಪುನಸ್ಕಾರಕ್ಕೆ ಆನ್ ಲೈನ್ ಮೂಲಕವೇ ಬುಕ್ ಮಾಡಿಕೊಳ್ಳಲು ಆ್ಯಪ್ ನೆರವಾಗಲಿದೆ. ಅಲ್ಲದೇ, ಕಾಶಿ ಯಾತ್ರೆ, ಮಾಸನ ಸರೋವರ ಯಾತ್ರೆ, ಚಾರ್ ಧಾಮ್ ಮತ್ತು ಭಾರತ್ ಗೌರವ್ ಕಾಶಿ ಯಾತ್ರೆಗೆ ಆ್ಯಪ್ ಸಹಾಯ ಮಾಡಲಿದೆ.
ಇನ್ಮುಂದೆ ದೇಗುಲದ ಹುಂಡಿ ಹಣ ಅದೇ ದೇವಾಲಯದ ಅಭಿವೃದ್ಧಿಗಾಗಿ ಬಳಕೆ ಮಾಡಬೇಕು.
ಜೊತೆಗೆ ತಸ್ತಿಕ್ ಹಣ ('ಸಿ' ದರ್ಜೆಯ ಹಿಂದೂ ದೇವಾಲಯಗಳ ಅರ್ಚಕರಿಗೆ ವಾರ್ಷಿಕವಾಗಿ ಕೊಡಲಾಗುವ ಗೌರವ ಭತ್ಯೆ) ನೇರವಾಗಿ ಅರ್ಚಕರಿಗೆ ತಲುಪುವ ವ್ಯವಸ್ಥೆ ಮಾಡಲಾಗುತ್ತದೆ.
ಪ್ರಮುಖ ದೇಗುಲಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಹಾಗೂ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಭಕ್ತರಿಗೆ ಮೊಬೈಲ್ ಬಳಕೆ ನಿಷೇಧ ಮಾಡುವುದು ಸೇರಿ ಹಲವು ಹೊಸ ರೂಲ್ಸ್ ಜಾರಿಗೊಳಿಸಿದ್ದಾರೆ.
A ಮತ್ತು B ದರ್ಜೆಯ ಎಲ್ಲಾ ದೇವಸ್ಥಾನಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತದೆ. ದೇವಸ್ಥಾನದ ಆಸ್ತಿಗಳನ್ನು ಸರ್ವೆ ಮಾಡಿಸಿ ಅವುಗಳನ್ನು ಸುಪರ್ದಿಗೆ ತೆಗೆದುಕೊಳ್ಳಲಾಗುತ್ತದೆ.
















