ಮಂಗಳೂರು: ಕೋಟೆಕಾರು (Kotekaru) ಬ್ಯಾಂಕ್ ಕೆ.ಸಿ ರೋಡ್ ಶಾಖೆಯಿಂದ ಭಾರೀ ದರೋಡೆ (Bank Theft) ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಸಿಸಿ ಕ್ಯಾಮೆರಾ (CC Camera) ರಿಪೇರಿಗೆ ನೀಡಿದ ದಿನವೇ ಬ್ಯಾಂಕ್ ಲೂಟಿ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಹಾಡಹಗಲೇ ಐದು ಮಂದಿ ಆಗಂತುಕರು ಫಿಯೆಟ್ ಕಾರಿನಲ್ಲಿ ಬಂದು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ಕೆ.ಸಿ.ರೋಡ್ ಶಾಖೆಯಿಂದ 5 ಲಕ್ಷ ನಗದು ಸೇರಿ 12 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿ ನಾಲ್ಕೈದು ಚೀಲದಲ್ಲಿ ಹಣ ತುಂಬಿಸಿಕೊಂಡು ಪರಾರಿಯಾಗಿದ್ದಾರೆ. ಗನ್, ತಲ್ವಾರ್, ಚಾಕು ತೋರಿಸಿ ದರೋಡೆ ಮಾಡಲಾಗಿದೆ. ದರೋಡೆಕೋರರ ಪತ್ತೆಗೆ ಎರಡು ತಂಡಗಳ ರಚನೆ ಮಾಡಲಾಗಿದೆ. ಬ್ಯಾಂಕ್ನ ಸಿಸಿ ಕ್ಯಾಮೆರಾ ಕೂಡಾ ಇಂದೇ ರಿಪೇರಿಗೆ ನೀಡಲಾಗಿತ್ತು. ಈ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿಯ ಮೇಲೆಯೇ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಪ್ರಕರಣದ ಕುರಿತು ಪ್ರತ್ಯಕ್ಷದರ್ಶಿ ಎದುರು ಮನೆಯ ಉಷಾ ಮಾತನಾಡಿ, ಐದು
ಮಂದಿ ಬ್ಯಾಂಕ್ನಿಂದ ಬರುತ್ತಿರುವುದನ್ನು ನಾನು ನೋಡಿದೆ. ಇವರನ್ನು ಕಂಡು ನನಗೆ ಭಯವಾಯಿತು. ಮೊದಲು ನಾಲ್ಕು ಮಂದಿ ಒಂದು ಗೋಣಿಯಲ್ಲಿ ಹಣ ಎಳೆದುಕೊಂಡು ಬರುತ್ತಿದ್ದರು. ಕೊನೆಗೆ ಒಬ್ಬ ಓಡಿಕೊಂಡು ಬಂದಿದ್ದಾನೆ. ಐದು ಮಂದಿ ಕೂಡ ಮಾಸ್ಕ್ ಹಾಗೂ ಟೋಪಿ ಧರಿಸಿದ್ದರು. ಶುಕ್ರವಾರ ಹಿನ್ನೆಲೆ ರಸ್ತೆಯಲ್ಲಿ ಯಾರೂ ಇರಲಿಲ್ಲ ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಸಿಎಂ ಕಾರ್ಯಕ್ರಮ ಹಿನ್ನಲೆ ಮಂಗಳೂರು ನಗರದಲ್ಲಿ ಪೊಲೀಸರು ಹೆಚ್ಚಿನ ಭದ್ರತೆ ನೀಡಿದ್ದರು. ಬ್ಯಾಂಕ್ ಇರುವ ಜಾಗದಲ್ಲಿ ಮುಸ್ಲಿಂ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಶುಕ್ರವಾರ ನಮಾಜ್ಗಾಗಿ ಮಸೀದಿಗೆ ತೆರಳಿದ್ದರು. ಈ ಜಾಗದಲ್ಲಿ ಯಾರು ಇಲ್ಲ ಎಂಬುದನ್ನು ಖಚಿತ ಪಡಿಸಿಸಿಕೊಂಡೇ ಈ ಕೃತ್ಯವನ್ನು ಎಸಗಲಾಗಿದೆ.















