ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಮಾಡಿ ಅನುಮೋದಿಸಲಾಗಿದೆ. ಅಲ್ಪಸಂಖ್ಯಾತ ಶಿಕ್ಷಣ ಕಾಯ್ದೆ ತಿದ್ದುಪಡಿಗೆ ಸಂಪುಟ ಅಸ್ತು ಎಂದಿದೆ. ಮುಸ್ಲಿಂ ಅಷ್ಟೇ ಅಲ್ಲ, ಕ್ರಿಶ್ಚಿಯನ್ ಇನ್ಸ್ಸ್ಟಿಟ್ಯೂಷನ್ಗೆ ಷರತ್ತುಗಳು ಅನ್ವಯವಾಗಲಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಎಲ್ಲರಿಗೂ ಮಕ್ತ ಅವಕಾಶವಿರಲಿದೆ. ಅಲ್ಪಸಂಖ್ಯಾತ ಶಿಕ್ಷಣ ಕಾಯ್ದೆಯಲ್ಲಿ ಮೊದಲು ನಿರ್ಬಂಧಗಳಿದ್ದವು ಎಂದು ತಿಳಿಸಿದ್ದಾರೆ.
ವಿಶ್ವಬ್ಯಾಂಕ್ ನೆರವಿನಲ್ಲಿ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳ ಉನ್ನತೀಕರಣಕ್ಕೆ 1500 ಕೋಟಿ ರೂ. ಕಾರ್ಯಕ್ರಮ ಯೋಜನೆ ರೂಪಿಸಲಾಗಿದೆ. ವಿಶ್ವಬ್ಯಾಂಕ್ನಿಂದ 1,750 ಕೋಟಿ ರೂ. ಹಣ ಸಾಲ ಪಡೆಯುವುದು. ಒಟ್ಟು ಉನ್ನತ ಶಿಕ್ಷಣ ಸಂಸ್ಥೆಗಳ ಬಲವರ್ಧನೆಗೆ 2,500 ಕೋಟಿ ರೂ. ಅನುದಾನಕ್ಕೆ ಅಸ್ತು ಎನ್ನಲಾಗಿದೆ. 19.70 ಕೋಟಿ ರೂ. ವೆಚ್ಚದಲ್ಲಿ ಲ್ಯಾಬ್ಗಳು ಡಯಾಗ್ನಸ್ಟಿಕ್ ಕಿಟ್ ಖರೀದಿಸಲು ಅನುಮೋದನೆ ನೀಡಲಾಗಿದೆ.
ಅಲ್ಪಸಂಖ್ಯಾತ ಶಿಕ್ಷಣ ಕಾಯ್ದೆ ತಿದ್ದುಪಡಿಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ
ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಪರ ಮತ್ತೊಂದು ನಿರ್ಣಯ ಕೈಗೊಂಡಿದೆ. ಅಲ್ಪಸಂಖ್ಯಾತ ಶಿಕ್ಷಣ ಕಾಯ್ದೆ ತಿದ್ದುಪಡಿಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ. ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ನಿಬಂಧನೆ, ಷರತ್ತು ಸಡಿಲಿಸಲಾಗಿದೆ. ಆ ಮೂಲಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಅನುಕೂಲಕರವಾಗಲಿದೆ.
ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ನಿಗದಿತ ವಿದ್ಯಾರ್ಥಿಗಳ ಪ್ರವೇಶಾತಿಗೆ ಷರತ್ತಿಲ್ಲ. ಕಡಿಮೆ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಇದ್ದರೂ ಆ ಕಾಲೇಜಿನ ಮಾನ್ಯತೆ ಮುಂದುವರಿಸಲಾಗುವುದು. ಈ ಹಿಂದೆ ಪ್ರಾಥಮಿಕ ಮತ್ತು
ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ನಿಗದಿಯಾಗಿತ್ತು. ಪ್ರಾಥಮಿಕ ಶಾಲೆಗಳಲ್ಲಿ ಶೇ.25ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿರಬೇಕಿತ್ತು. ಪ್ರೌಢಶಾಲೆಯಲ್ಲಿ ಶೇ.50ರಷ್ಟು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿರಬೇಕಿತ್ತು. ನೂತನ ವಿಧೇಯಕ ಪ್ರಕಾರ ಇನ್ನುಂದೆ ಇಂತಹ ನಿಬಂಧನೆ ಇಲ್ಲ.
ಠೇವಣಿದಾರರ ಹಿತಾಸಕ್ತಿ ಕಾಯ್ದೆಗೆ ತಿದ್ದುಪಡಿಗೆ ಸಂಪುಟ ಅಸ್ತು
ಕಾರ್ಪೊರೇಷನ್ ಸಂಸ್ಥೆಗಳಿಗೆ ಅಂತರ್ ಉದ್ಯಮ ಠೇವಣಿ ಇಡುವುದಕ್ಕೆ ಸಂಪುಟ ಸಮ್ಮತಿ ಸೂಚಿಸಿದೆ. ಒಂದರಿಂದ ಮತ್ತೊಂದು ಉದ್ಯಮದಲ್ಲಿ ಹಣ ಠೇವಣಿ ಇಡುವುದು. ಸೇವೆ ಎಲ್ಲಿದೆ ಅಲ್ಲಿಂದ ಬೇರೆಯದಕ್ಕೆ ಠೇವಣಿ ಇಡಬಹುದಾಗಿದೆ. ಆ ಮೂಲಕ ಠೇವಣಿದಾರರ ಹಿತಾಸಕ್ತಿ ಕಾಯ್ದೆಗೆ ತಿದ್ದುಪಡಿಗೆ ಸಂಪುಟ ಅಸ್ತು ಎಂದಿದೆ. ಠೇವಣಿದಾರರ ಹಿತ ಕಾಯುವುದು, ರಕ್ಷಣೆ, ಹೊಣೆಗಾರಿಕೆಯಿದೆ.
ಔಷಧ ನಿಯಂತ್ರಣ ಇಲಾಖೆ ಹಾಗೂ ಆಹಾರ ಸುರಕ್ಷತೆ ಗುಣಮಟ್ಟ ಇಲಾಖೆಗಳನ್ನು ವಿಲೀನಗೊಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ. ಪರಿಣಾಮಕಾರಿಯಾಗಿ ಕೆಲಸ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ರಸ್ತೆಗಳ ಅಭಿವೃದ್ಧಿ 694 ಕೋಟಿ ರೂ. ಅನುದಾನ
ರಸ್ತೆ ಗುಂಡಿಗಳಿಂದ ಸರ್ಕಾರ ಟೀಕೆಗೊಳಗಾಗಿತ್ತು. ಹಾಗಾಗಿ ರಸ್ತೆ ಡಾಂಬರೀಕರಣಕ್ಕೆ ಅನುದಾನ ಬಿಡುಗಡೆ ಮಾಡಿದೆ. 694 ಕೋಟಿ ರೂ. ಅನುದಾನದಲ್ಲಿ 1681 ಕಿ.ಮೀ ಬಿಬಿಎಂಪಿ ವ್ಯಾಪ್ತಿಯ ಉಪಮುಖ್ಯ ರಸ್ತೆಗಳ ಅಭಿವೃದ್ಧಿ ಮಾಡುವುದು. ಸಂಪಂಗಿರಾಮ ನಗರದಲ್ಲಿ ಸಮಾಜಕಲ್ಯಾಣ ಭವನ ನಿರ್ಮಾಣಕ್ಕೆ 40.50 ಕೋಟಿ ರೂ. ಅನುದಾನಕ್ಕೆ ಸಮ್ಮತಿಸಲಾಗಿದೆ.