ಸಂಭಾಲ್: ಉತ್ತರ ಪ್ರದೇಶದ ಸಂಭಾಲ್ ನಗರದಲ್ಲಿರುವ ಐತಿಹಾಸಿಕ ಶಾಹಿ ಜಾಮಾ ಮಸೀದಿಯ ಎರಡನೇ ಹಂತದ ಸಮೀಕ್ಷೆ ವೇಳೆ ನಡೆದ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಭಾನುವಾರದಂದು ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆಂದು ಅಧಿಕಾರಿಗಳು ಬಂದಾಗ ಈ ಗಲಾಟೆ ಆರಂಭವಾಯಿತು.
ಸದ್ಯ ಸ್ಥಳದಲ್ಲಿ ಶಾಂತಿ ನೆಲೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಮುನ್ನೆಚ್ಚರಿಕೆಯಾಗಿ ಇಂಟರ್ನೆಟ್ ಸೇವೆಗಳನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ. ಜಿಲ್ಲಾಡಳಿತವು ಸೋಮವಾರ (ನವೆಂಬರ್ 25) 12 ನೇ ತರಗತಿವರೆಗಿನ ಎಲ್ಲಾ
ವಿದ್ಯಾರ್ಥಿಗಳಿಗೆ ರಜೆ ಘೋಷಿಸಿತು. ಘರ್ಷಣೆಯ ನಂತರ ಕಲ್ಲು ತೂರಾಟದ ನಡೆದಿದ್ದು, ಆ ಪ್ರದೇಶದಲ್ಲಿ ಕಲ್ಲುಗಳು, ಸೋಡಾ ಬಾಟಲಿಗಳು, ಸುಡುವ ಅಥವಾ ಸ್ಫೋಟಕ ವಸ್ತುಗಳ ಮಾರಾಟ ಅಥವಾ ಸಂಗ್ರಹಣೆಯನ್ನು ಸಹ ನಿಷೇಧ ಮಾಡಲಾಗಿದೆ.















