ನವದೆಹಲಿ: ಕಳೆದ ವರ್ಷದಿಂದ ಸತತ ಹೋರಾಟ, ವಿಪಕ್ಷಗಳ ಆಗ್ರಹ, ಪ್ರತಿಭಟನೆ, ಬಂದ್, ರ್ಯಾಲಿ ಸೇರಿ ಹಲವು ರೀತಿಯ ರೈತರ ಪ್ರತಿಭಟನೆಗೆ ಜಗ್ಗದ ಕೇಂದ್ರ ಸರ್ಕಾರ ಇದೀಗ ದಿಢೀರ್ ಮೂರು ಕೃಷಿ ಮಸೂದೆಯನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇದು ರೈತರಿಗೆ, ವಿಪಕ್ಷಗಳಿಗೆ ಸಂದ ಜಯ ಎಂದೇ ಬಿಂಬಿಸಲಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ಜಮ್ಮು ಮತ್ತು ಕಾಶ್ಮೀರದಿಂದ ಮತ್ತೊಂದು ಕೂಗೂ ಎದ್ದಿದೆ. ರದ್ದು ಮಾಡಿರುವ ಆರ್ಟಿಕಲ್ 370 ಸ್ಥಾನಮಾನ ಮರುಸ್ಥಾಪಿಸಲು ಆಗ್ರಹ ಹೆಚ್ಚಾಗಿದೆ.
ಜಮ್ಮು ಮತ್ತು ಕಾಶ್ಮೀರ ನಾಯಕರಾದ ಮೆಹಬೂಬಾ ಮುಫ್ತಿ, ಫಾರುಖ್ ಅಬ್ದುಲ್ಲಾ ಸೇರಿದಂತೆ ಹಲವರು ಕಣಿವೆ ರಾಜ್ಯದಲ್ಲಿ ಆರ್ಟಿಕಲ್ 370
ಮರುಸ್ಥಾಪಿಸಲು ಮೋದಿಯನ್ನು ಆಗ್ರಹಿಸಿದ್ದಾರೆ. ಕೃಷಿ ಮಸೂದೆ ಹಿಂಪಡೆದ ರೀತಿಯಲ್ಲೇ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮರುಸ್ಥಾಪಿಸಲು ಒತ್ತಾಯಿಸಿದ್ದಾರೆ.














