ಬಂಟ್ವಾಳ : ಬಂಟ್ವಾಳ ತಾಲೂಕಿನ ಬರಿಮಾರು ಸಮೀಪದ ಕಲೆಟ್ಟಿ ಪ್ರದೇಶದಲ್ಲಿ ಖಾಸಗಿ ಶಾಲಾ ಬಸ್ ಮೇಲೆ ಮರ ಬಿದ್ದು ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಬಾಲಕಿಯ ಪೆರ್ನೆ ನೆಕ್ಕರೆ ಅಮೈ ನಿವಾಸಕ್ಕೆ ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ದುರಂತದಲ್ಲಿ ಅಮೂಲ್ಯ ಜೀವ ಕಳೆದುಕೊಂಡ ಬಾಲಕಿಯ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಅವರು, ಮೃತಳ ತಾಯಿ-ತಂದೆ ಹಾಗೂ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ದುಃಖದಲ್ಲಿ ಭಾಗಿಯಾದರು. ಈ ದುಃಖದ ಸಂದರ್ಭದಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಧೈರ್ಯದಿಂದ ಇರಬೇಕೆಂದು ಕುಟುಂಬಕ್ಕೆ ಸಾಂತ್ವನ ಹೇಳಿ, ಮೃತಳ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.
ಈ ವೇಳೆ ದುರಂತದಲ್ಲಿ ಗಾಯಗೊಂಡಿರುವ
ವಿದ್ಯಾರ್ಥಿಗಳು ಶೀಘ್ರ ಗುಣಮುಖರಾಗಲೆಂದು ಹಾರೈಸಿದ ಬಿ. ರಮಾನಾಥ ರೈ ಅವರು, ಇಂತಹ ದುರ್ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ನಾರಾಯಣ ನಾಯ್ಕ್, ಚಂದ್ರಶೇಖರ್ ಬಂಡಾರಿ, ಬಿ ಆರ್ ಅಂಚನ್, ಫಾರೂಕ್ ಪೆರ್ನೆ, ಗೀತೆಶ್ ಪೆರ್ನೆ ಮೊದಲದವರು ಉಪಸ್ಥಿತರಿದ್ದರು.
















