ಬೆಂಗಳೂರು : ದೇಶದಲ್ಲಿ ದುಷ್ಕೃತ್ಯ ನಡೆಸಲು ಐಸಿಸ್ ಉಗ್ರರು ಸಂಚು ನಡೆಸಿರುವ ಹಿನ್ನೆಲೆ ಬೆಂಗಳೂರು ಸೇರಿದಂತೆ ದೇಶದ 41 ಕಡೆ ಎನ್ಐಎ ದಾಳಿ ನಡೆಸಿ ಶಂಕಿತರನ್ನು ವಶಕ್ಕೆ ಪಡೆದಿದೆ. ದಾಳಿ ವೇಳೆ ಹಲವು ಶಂಕಿತ ಉಗ್ರರನ್ನು ವಶಕ್ಕೆ ಪಡೆದುಕೊಂಡು ಎನ್ಐಎ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಬೆಂಗಳೂರಿನಲ್ಲಿ 1 ಕಡೆ, ಪುಣೆಯಲ್ಲಿ 2 ಕಡೆ, ಥಾಣೆಯ ಗ್ರಾಮಿಣ ಭಾಗದಲ್ಲಿ 31 ಹಾಗೂ ದೇಶದ ಹಲವೆಡೆ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು, ಪ್ರಮುಖವಾಗಿ ಭಿವಂಡಿಯ ಪಾದ್ಘಾ ಗ್ರಾಮದಲ್ಲಿ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿದೆ. ಮಹಾರಾಷ್ಟ್ರ ಎಟಿಎಸ್ ನೆರವಿನಿಂದ ಎನ್ ಐಎ ಅಧಿಕಾರು 7-8 ಶಂಕಿತರನ್ನು ಬಂಧಿಸಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಓರ್ವ ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ. ನಗರದ ಟ್ಯಾನರಿ ರಸ್ತೆಯಲ್ಲಿರುವ ಶಂಕಿತ ಉಗ್ರ ಐಸಿಸ್ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಆರೋಪ ಹಿನ್ನೆಲೆ ಅಪಾರ್ಟ್ಮೆಂಟ್ನ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅಪಾರ್ಟ್ಮೆಂಟ್ನಲ್ಲೇ ಇದ್ದ ಅಲಿ ಅಬ್ಬಾಸ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿರುವ ಶಂಕಿತ ಉಗ್ರ
ಅಲಿ ಅಬ್ಬಾಸ್ ಮುಂಬೈ ಮೂಲದವನಾಗಿದ್ದು, ಟ್ಯಾನರಿ ರಸ್ತೆಯಲ್ಲಿ ಉರ್ದು ಶಾಲೆ ನಡೆಸುತ್ತಿದ್ದ. ಉರ್ದು ಶಾಲೆ ನಡೆಸುವ ಮೂಲಕ ಐಸಿಸ್ ಚಿಂತನೆ ಬಿತ್ತುತ್ತಿದ್ದ ಎನ್ನಲಾಗಿದೆ. ಅಲಿ ಅಬ್ಬಾಸ್ ಪತ್ನಿ ಆಸ್ಪತ್ರೆ ನಡೆಸ್ತಾ ಇದ್ರು. ಎನ್ಐಎ ದಾಳಿ ವೇಳೆ ಅಲಿ ಅಬ್ಬಾಸ್ ಮನೆಯಲ್ಲಿ 16.42 ಲಕ್ಷ ನಗದು ಪತ್ತೆಯಾಗಿದೆ. ಅಬ್ಬಾಸ್ ಮೊಬೈಲ್ ಹಾಗೂ ಲ್ಯಾಪ್ ಟಾಪ್ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.














