ತಿರುವನಂತಪುರಂ : ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಜೂನ್ 16ರ ವರೆಗೆ ಲಾಕ್ ಡೌನ್ ವಿಸ್ತರಣೆಗೊಂಡಿದ್ದು , ಇದರ ಅಂಗವಾಗಿ ಕಾಸರಗೋಡು ಜಿಲ್ಲೆಯೂ ಸೇರಿದಂತೆ ಕೇರಳದಲ್ಲಿ ಜೂ.12 ಮತ್ತು 13 ರಂದು ಸಂಪೂರ್ಣ ಲಾಕ್ ಡೌನ್ ಏರ್ಪಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಕಠಿಣ ನಿಯಂತ್ರಣ ಜಾರಿಗೊಳಿಸಲಾಗಿದೆ. ಜಿಲ್ಲೆಯ ಯಾವುದೇ ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಕೂಡ ಅನುಮತಿಯಿಲ್ಲ. ಹೋಮ್ ಡೆಲಿವರಿ ಮಾತ್ರ ನಡೆಸಬಹುದು.
ಕಟ್ಟಡ ನಿರ್ಮಾಣ ಕಾಮಗಾರಿಗೆ ಈ ಮೊದಲೇ ತಿಳಿಸಲಾದ ನಿಬಂಧನೆಗಳ ಅನ್ವಯ ಅನುಮತಿ ನೀಡಲಾಗಿದೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಟ್ಟಡ ನಿರ್ಮಾಣ ನಡೆಯುವ
ಪ್ರದೇಶ ವ್ಯಾಪ್ತಿಯ ಪೊಲೀಸ್ ಠಾಣೆಯಿಂದ ಮುಂಗಡ ಅನುಮತಿ ಪಡೆದಿರಬೇಕು ಎಂದು ಜಿಲ್ಲಾಡಳಿತವು ಸ್ಪಷ್ಟಪಡಿಸಿದೆ. ಅನಿವಾರ್ಯ ಸಾಮಗ್ರಿಗಳಿಗೆ ಮಾತ್ರ ರಿಯಾಯಿತಿ ನೀಡಲಾಗಿದೆ. ಆಹಾರ ಪದಾರ್ಥಗಳು, ಧಾನ್ಯಗಳು, ತರಕಾರಿ, ಹಾಲು, ಮೀನು, ಮಾಂಸ ಮಾರಾಟ ಕೇಂದ್ರಗಳು, ಬೇಕರಿಗಳು ಇತ್ಯಾದಿಗಳು ಬೆಳಗ್ಗೆ 7 ರಿಂದ ರಾತ್ರಿ 7 ಗಂಟೆಯ ವರೆಗೆ ತೆರೆದು ಕಾರ್ಯಾಚರಿಸಬಹುದು ಎಂದು ತಿಳಿಸಲಾಗಿದೆ.















