Coastal Bulletin

ಬಂಟ್ವಾಳ :ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿ 74ರ ಟೋಲ್ ಗೇಟ್ ಸಮೀಪ ಚತುಷ್ಪಥ ರಸ್ತೆಗೆ ಡಿವೈಡರ್ ಅಳವಡಿಸುವ ಕೆಲಸ ಶುಕ್ರವಾರ ನಡೆದಿದ್ದು, ಇದರಿಂದ ಕಳ್ಳಿಗೆ ಗ್ರಾಮಸ್ಥರಿಗೆ ತೊಂದರೆಯಾಗುತ್ತದೆ ಎಂದು ಕಳ್ಳಿಗೆ ಪಂಚಾಯತ್ ಉಪಾಧ್ಯಕ್ಷ ದಾಮೋದರ್ ನೆತ್ತರಕೆರೆ ನೇತೃತ್ವದ ನಿಯೋಗ ಆಕ್ಷೇಪ ವ್ಯಕ್ತಪಡಿಸಿ, ಕಾಮಗಾರಿಗೆ ತಡೆನೀಡಿದರು.

ಬಿ.ಸಿ.ರೋಡಿನಿಂದ ಬ್ರಹ್ಮರಕೂಟ್ಲುವಿಗೆ ಹಾಗೂ ಬ್ರಹ್ಮರಕೂಟ್ಲುವಿನಿಂದ ಮಂಗಳೂರಿಗೆ ತೆರಳುವ ಗ್ರಾಮಸ್ಥರು ನಿತ್ಯ ಇಲ್ಲಿಂದ ಸಂಚರಿಸುತ್ತಿದ್ದು ಗ್ರಾಮಸ್ಥರ ಬೇಡಿಕೆ ಮೇರೆಗೆ ಕಾಮಗಾರಿಗೆ ತಡೆನೀಡಲಾಗಿದೆ ಹಾಗೂ ಕಾಮಗಾರಿಯು ಅಭಿವೃದ್ಧಿಗೆ ಪೂರಕವಾಗಿರದೆ ಆಸುಪಾಸಿನ ಜನರಿಗೆ ಬಾರಿ ತೊಂದರೆ ಯಾಗುತ್ತಿದೆ ಎಂದು ನಿಯೋಗವು ತಿಳಿಸಿದೆ . ಈ

ಬಗ್ಗೆ ಗ್ರಾಮಸ್ಥರಿಗೆ ಭರವಸೆ ನೀಡಿದ ಹೆದ್ದಾರಿ ಇಲಾಖೆ ಪ್ರಾಧಿಕಾರ ಅಧಿಕಾರಿಗಳು ಮತ್ತು ಇಂಜಿನಿಯರ್ ಶನಿವಾರ ಬ್ರಹ್ಮರಕೂಟ್ಲುವಿಗೆ ಆಗಮಿಸಿ ಪರಿಶೀಲಿಸುವ ಭರವಸೆ ನೀಡಿದರು. ಈ ಸಂದರ್ಭ ಪಂಚಾಯತ್ ಸದಸ್ಯರಾದ ಮನೋಜ್ ವಳವೂರು, ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಸತೀಶ್ ಬ್ರಹ್ಮರಕೂಟ್ಲು ಮತ್ತಿತರರು ಉಪಸ್ಥಿತರಿದ್ದರು.‌

Leave a Comment