ಬಂಟ್ವಾಳ :ಅನೇಕ ಸಂಘ ಸಂಸ್ಥೆಗಳು ತಮ್ಮ ವಿಶೇಷ ದಿನಾಚರಣೆಯ ವೇಳೆ ಸಾಮೂಹಿಕ ಸತ್ಯನಾರಾಯಣ ಪೂಜೆ, ವರಮಹಾಲಕ್ಷ್ಮಿ ಪೂಜೆ, ಶನೈಶ್ಚರ ಸೇವೆಗಳಂತಹ ಪೂಜೆಯಲ್ಲಿ ತೊಡಗಿ ಆದ್ಯಾತ್ಮಿಕ ಚಟುವಟಿಕೆಯಲ್ಲಿ ಸಮುದಾಯ ಒಳಗೊಳ್ಳುವಂತೆ ಮಾಡುವುದು ಉತ್ತಮ ಕಾರ್ಯಕ್ರಮವಾಗಿದೆ. ಆದರೆ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಸಸ್ಯನಾರಾಯಣ ಕಾರ್ಯಕ್ರಮದ ಪರಿಕಲ್ಪನೆ ಅನನ್ಯವೂ ಅನುಕರಣೆಗೆ ಯೋಗ್ಯವೂ ಆಗಿರುವಂಥದ್ದು. ಅಭಿವೃದ್ಧಿಯ ಹೆಸರಿನಲ್ಲಿ ಸಸ್ಯರಾಶಿಗಳು ಮಾಯವಾಗುತ್ತಿರುವುದರ ಜೊತೆಗೆ ತೌಳವ ನಂಬಿಕೆಯ ಬನಗಳು ಕೂಡ ಕಾಂಕ್ರೀಟು ಕಟ್ಟೆಗಳು ಇಂಟರ್ಲಾಕ್ ನೆಲಹಾಸು ಸಂಸ್ಕೃತಿಗೆ ವಾಲುತ್ತಿರುವುದು ಪ್ರಕೃತಿಯ ಜೀವಿಗಳ ಜೊತೆಗೆ ಮನುಷ್ಯ ವರ್ಗಕ್ಕೂ ಮಾಡುತ್ತಿರುವ ಘೋರ ಅಪಚಾರವಾಗಿದೆ. ದೇವತಾ ನಂಬಿಕೆಯ ಜೊತೆಗೆ ಮಾಡುವ ಅಭಿವೃದ್ಧಿ ಪ್ರಕೃತಿಗೆ ಪೂರಕವಾಗಿರುವುದು ಇಂದಿನ ಮತ್ತು ಮುಂದಿನ ಅಗತ್ಯವೂ ಆಗಿದೆ ಎಂದು EDU ಕಾರುಣ್ಯ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಇದರ ಅಧ್ಯಕ್ಷರಾದ ಮೋಹನದಾಸ ಮರಕಡ ಇವರು ಅಭಿಪ್ರಾಯ ಪಟ್ಟರು.
ಅವರು ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳೆದ 25ವರ್ಷಗಳಿಂದ ಸಿಂಹ ಸಂಕ್ರಮಣ ದಿನದಂದು ನಡೆಯುವ ಸತ್ಯನಾರಾಯಣ ಪೂಜೆಯ ಜೊತೆಗೆ ಸಸ್ಯ ನಾರಾಯಣ ಕಾರ್ಯಕ್ರಮದಲ್ಲಿ ಔಷದಿಯ ಗುಣವುಳ್ಳ ಸಸ್ಯಗಳನ್ನು ವಿತರಿಸಿ ಮಾತನಾಡಿದರು.
ಸಾಮೂಹಿಕ ಸತ್ಯನಾರಾಯಣ ಪೂಜೆ ವಿಶೇಷ ಪರಿಕಲ್ಪನೆಯೊಂದಿಗೆ ಶ್ರದ್ಧಾ ಕೇಂದ್ರವೊಂದು ಪ್ರಕೃತಿಯ ರಕ್ಷಣೆಗೆ ಹೊರಟಿರುವುದರಿಂದ ಸಕಲರ ಸಮೃದ್ಧಿ ಸಾಧ್ಯವಾಗಲಿದೆ ಎಂದು ಅತಿಥಿ
ಭಾರತಿ ಶ್ರೀಧರ್ ರಾವ್, ತುಗುರು ಅಭಿಪ್ರಾಯ ಪಟ್ಟರು.
ಸಭೆಯಲ್ಲಿ ಇಂಚರ ಕಲಾವಿದರಾದ ಸದಾಶಿವ ಡಿ ತುಂಬೆ ಅತಿಥಿಯಾಗಿದ್ದರು, ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ, ಜ್ಯೋತಿಗುಡ್ಡೆಯ ಅಧ್ಯಕ್ಷರು ನಾರಾಯಣ ನಾಯ್ಕರು ಅಧ್ಯಕ್ಷತೆ ವಹಿಸಿದ್ದರು.
ಕು. ಸ್ವರ ಎಂ ವಿ ಪ್ರಾರ್ಥಿಸಿ, ಮಲ್ಲಿಕಾ ಜ್ಯೋತಿಗುಡ್ಡೆ ಸ್ವಾಗತಿಸಿ, ವೇಣುಗೋಪಾಲ್ ವಂದಿಸಿದರು. ಉದಯ ಕುಮಾರ್ ಜ್ಯೋತಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.














