ಬಂಟ್ವಾಳ:ಇಲ್ಲಿನ ಉಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 20 ವರ್ಷಗಳಿಂದ ಅಡುಗೆ ಸಿಬ್ಬಂದಿಯಾಗಿ ದುಡಿಯುತ್ತಿದ್ದ ಯಶೋಧ ಮಹಾಬಲ ಪೂಜಾರಿ ಇವರನ್ನು ಕಳೆದ ತಿಂಗಳು ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರ ಆದೇಶದಂತೆ ಏಕಾಯೇಕಿ ಕೆಲಸದಿಂದ ವಜಾಗೊಳಿಸಿರುವುದು ಖಂಡನೀಯ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದರೂ ಅವರು ಸಮಗ್ರ ತನಿಖೆ ನಡೆಸದೆ ರಾಜಕೀಯ ಪ್ರೇರಿತವಾಗಿ ವರ್ತಿಸಿದ್ದಾರೆ ಎಂದು ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ ಆರೋಪಿಸಿದ್ದಾರೆ.
ಬಿ.ಸಿ.ರೋಡು ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಅಕ್ಷರ ದಾಸೋಹ ನೌಕರರ ಸಂಘದ ವತಿಯಿಂದ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಈ ಬಗ್ಗೆ ಶಿಕ್ಷಣ ಸಚಿವರಿಗೆ ದೂರು ಸಲ್ಲಿಸಲಾಗಿದ್ದು, ಸಿಬ್ಬಂದಿಯನ್ನು ಮರು ನೇಮಕಗೊಳಿಸದಿದ್ದಲ್ಲಿ ಎಐಟಿಯುಸಿ
ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದರು.
ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಜಯಶ್ರೀ, ಪ್ರಮುಖರಾದ ರಾಜಾ ಚೆಂಡ್ತಿಮಾರ್, ವೀಣಾ , ಜಯಂತಿ, ಕೃಷ್ಣಪ್ಪ ಪುದ್ದೊಟ್ಟು, ಸುರೇಂದ್ರ ಕೋಟ್ಯಾನ್ , ಇಬ್ರಾಹಿಂ ಮೈಂದಾಳ ಮತ್ತಿತರರು ಇದ್ದರು.















