ಫರಂಗಿಪೇಟೆ:ಶ್ರೀ ಆಂಜನೇಯ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ, ಧಾರ್ಮಿಕ ಸಭೆ ದೇವರನ್ನು ನಮ್ಮೊಳಗೆ ಅನುಷ್ಠಾನಗೊಳಿಸೋಣ: ಅದಮಾರು ಶ್ರೀ

Coastal Bulletin
ಫರಂಗಿಪೇಟೆ:ಶ್ರೀ ಆಂಜನೇಯ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ, ಧಾರ್ಮಿಕ ಸಭೆ ದೇವರನ್ನು ನಮ್ಮೊಳಗೆ ಅನುಷ್ಠಾನಗೊಳಿಸೋಣ: ಅದಮಾರು ಶ್ರೀ

ಬಂಟ್ವಾಳ :ಸಂಕಲ್ಪ ಒಳ್ಳೆಯದಿದ್ದರೆ ದೇವರ ಸಿದ್ದಿಯಾಗುತ್ತದೆ, ದೇವರು ಎಂದರೆ ದೋಷವಿಲ್ಲದವನು, ಅ ದೇವರನ್ನು ನಮ್ಮೊಳಗೆ ಅನುಷ್ಠಾನಗೊಳಿಸಬೇಕಿದೆ, ದೇಹ ಗಟ್ಟಿ ಇರುವ ತನಕ ದೇವರ ಸೇವೆ ಮಾಡೋಣ,ಪ್ರತಿ ಮನೆಯಲ್ಲಿಯೂ ಧರ್ಮಜ್ಞಾನದ ಅರಿವು ಮೂಡಿಸುವ ಅಗತ್ಯತೆ ಇದೆ, ದೇವಸ್ಥಾನದ ಮೂಲಕ ಸಮಾಜ ಕಟ್ಟುವ ಕೆಲಸವಾಗಲಿ ಎಂದು ಶ್ರೀ ಅದಮಾರು ಮಠದ ಶ್ರೀ ಶ್ರೀ ಈಶಪ್ರಿಯ ಶ್ರೀಪಾದಂಗಳವರು ಹೇಳಿದರು.


ಅವರು ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಾಚನ ನೀಡಿದರು.

ಪ್ರದಾನ ಭಾಷಣ ಮಾಡಿದ ರಾಷ್ಟೋತ್ಥಾನ ವಿದ್ಯಾಕೇಂದ್ರದ ವಿಭಾಗ ಮುಖ್ಯಸ್ಥ ಡಾ| ಅರುಣ್ ಉಳ್ಳಾಲ್ ಮಾತನಾಡಿ, ಶ್ರದ್ದಾಕೇಂದ್ರಗಳು ಸಮಾಜಮುಖಿಯಾಗಿ ಭಕ್ತಿಯೊಂದಿಗೆ ಶಕ್ತಿಯ ಕೇಂದ್ರವಾಗಬೇಕಿದೆ, ದೇವಸ್ಥಾನಗಳಲ್ಲಿ ಸಂಸ್ಕಾರಯುತ ಧಾರ್ಮಿಕ ಶಿಕ್ಷಣ ಕೊಡಬೇಕಿರುವುದು ಇಂದಿನ ತುರ್ತು. ನಗ ನಾಣ್ಯ ಅಧಿಕ ಸಂಗ್ರಹವಾಗುವ ಬದಲು ಭಕ್ತರ ಸಂಗಮ ಹೆಚ್ಚಾದರೆ ಶ್ರದ್ದಾಕೇಂದ್ರಗಳ ಉನ್ನತಿ ಸಾಧ್ಯ, ವಾರೊಕ್ಕೊಮ್ಮೆಯಾದರೂ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಹೋಗುವ ಅಭ್ಯಾಸ ಮಾಡೋಣ, ಬಡತನ, ಹಸಿವು ವಿದ್ಯೆ ನಮಗೆ ಬದುಕಿನ ಪಾಠವನ್ನು ಕಲಿಸುತ್ತದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದ

ಕ್ರೀಡಾಪಟು ಸದಾನಂದ ಆಳ್ವ ತೇವು ಇವರನ್ನು ಗೌರವಿಸಿ ಸನ್ಮಾನಿಸಲಾಯಿತು ಹಾಗೂ ಶ್ರೀ ಆಂಜನೇಯ ದೇವಸ್ಥಾನದ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.

ವೇದಿಕೆಯಲ್ಲಿ ಅರ್ಕುಳಬೀಡು ಧರ್ಮದರ್ಶಿಗಳು, ಶ್ರೀ ಉಳ್ಳಾಕ್ಲು ಮಗ್ನಂತಾಯಿ ಕ್ಷೇತ್ರದ ವಜ್ರನಾಭ ಶೆಟ್ಟಿ, ತುಂಬೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ, ಮಂಗಳೂರು ತುಳುನಾಡು ಚಿಟ್ಸ್ ನ ಸಂದೇಶ್ ಶೆಟ್ಟಿ ಕೊಲ್ಕೆ ,ಶ್ರೀ ಆಂಜನೇಯ ದೇವಸ್ಥಾನ ದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಅಂಜನಾದೇವಿ ಮಾತೃ ಮಂಡಳಿಯ ಅಧ್ಯಕ್ಷೆ ಭುವನೇಶ್ವರೀ ಶೆಟ್ಟಿ ತೇವು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಪ್ರತಿಷ್ಠಾ ವರ್ಧಂತಿ ಉತ್ಸವ ಸಮಿತಿಯ ಅಧ್ಯಕ್ಷ ಗೋಪಾಲ ಕುಲಾಲ್ ಗೋವಿಂತೋಟ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು, ಮನೋಜ್ ತುಪ್ಪಕಲ್ಲು ಸನ್ಮಾನಪತ್ರ ವಾಚಿಸಿದರು, ಪ್ರ.ಕಾರ್ಯದರ್ಶಿ ಕರುಣಾಕರ ಕೊಟ್ಟಾರಿ ಧನ್ಯವಾದವಿತ್ತು,ದೀಪಕ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.

Leave a Comment