ನಮ್ಮೆಲ್ಲರ ಶೀಲಕ್ಕ ಇನ್ನಿಲ್ಲ 'ಕರಾವಳಿ ಕೋಗಿಲೆ' ಖ್ಯಾತಿಯ ಸಂಗೀತ ಗುರುಗಳಾದ ವಿದುಷಿ ಶ್ರೀಮತಿ ಶೀಲಾ ದಿವಾಕರ್ ಅವರು ಇಂದು ಕಡಲೂರಿನ ಸಂಗೀತ ಲೋಕವನ್ನು ಶೋಕಸಾಗರದಲ್ಲಿ ಮುಳುಗಿಸಿ ಜೀವಸ್ವರಲೀನವಾಗಿದ್ದಾರೆ. ಶೀಲಾರವರು ಮಂಗಳೂರು, ಉಡುಪಿ, ಮತ್ತು ಕಾಸರಗೋಡು ತ್ರಿವಳಿ ಜಿಲ್ಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಅಮ್ಮನ ಮಮತೆಯಿತ್ತು ಸಂಗೀತ ಕಲಿಸಿದ ಆರ್ಯಭಟ ಪುರಸ್ಕೃತೆ. ಭರತನಾಟ್ಯ ಹಾಡುಗಾರಿಕೆ, ಶಾಸ್ತ್ರೀಯ ಕಛೇರಿ, ಸುಗಮ ಸಂಗೀತದಲ್ಲಿ ಉತ್ಕೃಷ್ಟ ಗುಣಮಟ್ಟದ ಆಯ್ಕೆಯಾಗಿದ್ದ ಇವರು ಯಾವುದೇ ರಾಗ - ತಾಳದಲ್ಲಿ ಸರ್ವಾಂಗ ಸೊಗಸಾಗಿ ಹಾಡಬಲ್ಲ ಮೇರು ಪ್ರತಿಭೆಯಾಗಿದ್ದರು.
ದುರಂತವೆಂದರೆ, ಕೆಲದಿನಗಳ ಹಿಂದೆ ದೇಹಸ್ಥಿತಿಯಲ್ಲಿ ಒಮ್ಮಿಂದೊಮ್ಮೆಗೆ ಏರುಪೇರು ಕಂಡುಬಂದಿದ್ದ ಕಾರಣ ಪ್ರಜ್ಞಾರಹಿತ ಸ್ಥಿತಿಯಲ್ಲೇ ಇದುವರೆಗೂ ಮಂಗಳೂರಿನ ಕೆ.ಎಂ.ಸಿ. ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಚಾನಕ್ಕಾಗಿ ಆರೋಗ್ಯ ಉಲ್ಬಣಿಸಿದ ಅವರ ಶೀಘ್ರ ಚೇತರಿಕೆಗಾಗಿ ಸಾವಿರಾರು ಶಿಷ್ಯಬಳಗದ ಮತ್ತು ಅಭಿಮಾನಿ ವೃಂದದ ಅವಿರತ ಪ್ರಾರ್ಥನೆ ನಡೆಯುತ್ತಲೇ ಇತ್ತು. ಆದರೆ, ಭಗವಂತನ ಕರೆಗೆ
ಓಗೊಟ್ಟು ನಮ್ಮೆಲ್ಲರ ಪ್ರೀತಿಯ ಶೀಲಕ್ಕ ಇಹಲೋಕ ತ್ಯಜಿಸಿ ಗಾನಜಗತ್ತಿಗೈದಿದ್ದಾರೆ. ಆ ಮೂಲಕ ಬಹುದೊಡ್ಡ ಸಂಖ್ಯೆಯ ಶಿಷ್ಯಬಳಗಕ್ಕೆ ಇನ್ನೆಂದೂ ತುಂಬಲಾರದ ನಷ್ಟವೊಂದು ಎದುರಾಗಿದೆ. ಭರತನಾಟ್ಯ ಹಿನ್ನೆಲೆ ಗಾಯನದಲ್ಲಿ, ಸಂಗೀತ ಕಛೇರಿಯಲ್ಲಿ ಕೇಳಿಬರುತ್ತಿದ್ದ ಅಮೂಲ್ಯ ಸ್ವರಸುಧೆಯೊಂದು ಬತ್ತಿಬರಿದಾಗಿದೆ. ಶೀಲಕ್ಕ ತಮಗಿದೋ ಹೃದಯದಾಳದ ನೂರೊಂದು ಶ್ರದ್ಧಾಂಜಲಿ. ಆಶೀರ್ವಾದ ಸದಾ ನಮ್ಮೊಂದಿಗಿರಲಿ.
✍️ ಡಾ. ಅರುಣ್ ಉಳ್ಳಾಲ್














