ಬಂಟ್ವಾಳ: ಅಕ್ರಮ ಕಪ್ಪು ಕಲ್ಲು ಗಣಿಕಾರಿಕೆ ನಿಲ್ಲಿಸುವಂತೆ ಪಲ್ಲಮಜಲು ಗ್ರಾಮದ ಜನರು ಜೂ. 24ರಂದು ಮಂಗಳವಾರ ಬೆಳಗ್ಗೆ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಜಿಲ್ಲಾಧಿಕಾರಿ, ತಹಶಿಲ್ದಾರ್ ಹಾಗೂ ಶಾಸಕರಿಗೆ ಮನವಿ ನೀಡಿದರು.
ಬಂಟ್ವಾಳ ಮೂಡ ಗ್ರಾಮದ ಪಲ್ಲಮಜಲು ಕುವಡ್ಕ ಎಂಬಲ್ಲಿ ಇತ್ತೀಚೆಗೆ ಕೆಲ ವರ್ಷಗಳಿಂದ ಕಪ್ಪು ಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ಅತೀ ತೀವ್ರವಾದ ಸ್ಫೋಟಕಗಳನ್ನು ಸುಮಾರು ಮೂರರಿಂದ ನಾಲ್ಕು ಬಾರಿ ಬಳಸುವುದರಿಂದ ಪರಿಸರದ ಸಾರ್ವಜನಿಕರ ಮನೆಗಳು ಅದುರುವುದಲ್ಲದೆ, ರಸ್ತೆಗಳಿಗೂ ಹಾನಿಯಾಗಿದೆ ಎಂದು ವಿವರಿಸಿ ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈಗಾಗಲೇ ಈ ಕುರಿತು ಸ್ಥಳ ಪರಿಶೀಲನೆ ನಡೆಸಲು ಸೂಚಿಸಲಾಗಿದ್ದು, ಗಣಿ ಇಲಾಖೆಗೂ
ಮಾಹಿತಿ ನೀಡಲಾಗಿದೆ. ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮನವಿ ಸ್ವೀಕರಿಸಿದ ತಹಸೀಲ್ದಾರ್ ತಿಳಿಸಿದರು.
ಈ ಸಂದರ್ಭ ರಫೀಕ್ ಪಲ್ಲಮಜಲು, ಚಂದ್ರಹಾಸ ಕಲ್ಲಗುಡ್ಡೆ, ಹರೀಶ್ ಕಲ್ಲಗುಡ್ಡೆ, ಹರ್ಷಿತ್ ಪಲ್ಲಮಜಲು, ಸಾದಿಕ್ ಪಲ್ಲಮಜಲು, ಉಮಾವತಿ ಬೆದ್ರಗುಡ್ಡೆ ಸಹಿತ ಸ್ಥಳೀಯರು, ಸ್ಫೋಟದ ತೀವ್ರತೆಗೆ ಮನೆಗಳು ಅದುರುತ್ತಿದ್ದು, ಜೀವನ ನಿರ್ವಹಣೆಗೆ ಕಷ್ಟವಾಗುತ್ತಿದೆ. ರಸ್ತೆಯೂ ಹದಗೆಟ್ಟಿದ್ದು, ಸಣ್ಣಪುಟ್ಟ ವಾಹನ ಓಡಾಟಕ್ಕೂ ಸಮಸ್ಯೆಗಳುಂಟಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು















