ಬೋಳಂಗಡಿ: ಅಮ್ಮ ಸ್ವೀಟ್ಸ್ ವತಿಯಿಂದ ವಿಶೇಷ ಚೇತನ ಮಕ್ಕಳಿಗೆ ಸಹಾಯಧನ ವಿತರಣೆ ಹಾಗೂ ಸೇವಾ ರತ್ನ ಪ್ರಶಸ್ತಿ ಪ್ರದಾನ

Coastal Bulletin
ಬೋಳಂಗಡಿ: ಅಮ್ಮ ಸ್ವೀಟ್ಸ್ ವತಿಯಿಂದ ವಿಶೇಷ ಚೇತನ ಮಕ್ಕಳಿಗೆ ಸಹಾಯಧನ ವಿತರಣೆ ಹಾಗೂ ಸೇವಾ ರತ್ನ ಪ್ರಶಸ್ತಿ ಪ್ರದಾನ

ಬಂಟ್ವಾಳ : ಸಮಾಜಸೇವೆ, ಪರೋಪಕಾರ, ದಾನಧರ್ಮದಂತಹ ಪುಣ್ಯ ಕಾರ್ಯಗಳನ್ನು ಮಾಡಲು ಲಕ್ಷ - ಕೋಟಿ ಸಂಪತ್ತು ಮುಖ್ಯ ಅಲ್ಲ ಪುಣ್ಯ ಗಳಿಸಲು ಬೇಕಾದ ನಿಷ್ಕಲ್ಮಶ ಹೃದಯ ವೈಶಾಲ್ಯತೆ ಬೇಕು ಅದು ಅಮ್ಮ ಸ್ವೀಟ್ಸ್ ಮಾಲಕ ಜನಾರ್ದನ ಅವರಲ್ಲಿ ಕಾಣುತ್ತಿದ್ದೇವೆ ಎಂದು ಲಯನ್ ದಾಮೋದರ್ ಬಿ.ಎಂ. ಹೇಳಿದರು.

ಮೆಲ್ಕಾರ್ ಸಮೀಪದ ಬೋಳಂಗಡಿಯ ಅಮ್ಮ ಸ್ವೀಟ್ಸ್ ಇದರ 17 ನೇ ವಾರ್ಷಿಕೋತ್ಸವದ ಪ್ರಯುಕ್ತ ಬೋಳಂಗಡಿ ಶಾಲಾ ವಠಾರದಲ್ಲಿ ನಡೆದ ವಿಶೇಷ ಚೇತನ ಮಕ್ಕಳಿಗೆ ಸಹಾಯಧನ ವಿತರಣೆ ಹಾಗೂ ಸೇವಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತೀರಾ ಬಡತನದಲ್ಲಿ ಬೆಳೆದು ಬಂದ ಜನಾರ್ದನ ಅವರು ತಮ್ಮ ಉದ್ಯಮದಲ್ಲಿ ಬಂದಂತಹ ಲಾಭಾಂಶದಲ್ಲಿ ಒಂದಂಶವನ್ನು ಜನರ ಸೇವೆಗಾಗಿ ಮೀಸಲಿಟ್ಟಿರುವುದು ಪ್ರಶಂಸನೀಯವಾಗಿದ್ದು ಇದು ಎಲ್ಲರಿಗೂ ಮಾದರಿಯಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮವನ್ನು  ಉದ್ಯಮಿ ಸತೀಶ್ ಆಚಾರ್ಯ ಉದ್ಘಾಟಿಸಿದರು. ತಾಲೂಕು ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀಮತಿ ರೇಖಾ, ಪತ್ರಕರ್ತ ಲತೀಫ್ ನೇರಳಕಟ್ಟೆ, ನಾಗ ಸುಜ್ಞಾನ ಫ್ರೆಂಡ್ಸ್ ನ ಸ್ಥಾಪಕಾಧ್ಯಕ್ಷ ನಾಗರಾಜ ಕಲ್ಲಡ್ಕ, ಪ್ರಮುಖರಾದ ಜನಾರ್ದನ

ಕುಲಾಲ್ ಬೊಂಡಾಲ, ಉದ್ಯಮಿಗಳಾದ ಎಂ.ಎನ್. ಮೆಲ್ಕಾರ್, ದುರ್ಗಾದಾಸ್ ಕಾಮತ್ ಅತಿಥಿಗಳಾಗಿ ಭಾಗವಹಿಸಿದ್ದರು.

ಇದೇ ವೇಳೆ ನಿವೃತ್ತ ಶಿಕ್ಷಕ ಕೇಶವ ಮಾಸ್ತರ್, ಶಂಭೂರು ಅಂಗನವಾಡಿ ಕೇಂದ್ರದ ಸಹಾಯಕಿ ಸುನೀತಾ, ಪನೋಲಿಬೈಲು ಅಂಗನವಾಡಿ ಕೇಂದ್ರದ ಸಹಾಯಕಿ ಯಮುನಾ ಹಾಗೂ ಗುಡ್ಡೆಯಂಗಡಿ ಅಂಗನವಾಡಿ ಕೇಂದ್ರದ ಸಹಾಯಕಿ ಶಕುಂತಲಾ ಅವರಿಗೆ 2026 ರ ಅಮ್ಮ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಜಿಲ್ಲೆಯ ಆಯ್ದ ವಿಶೇಷ ಚೇತನ ಮಕ್ಕಳಿಗೆ ಸಹಾಯಧನ ವಿತರಿಸಲಾಯಿತು.

ಬಂಟ್ವಾಳ ಪುರಸಭಾ ಮಾಜಿ ಸದಸ್ಯೆ ವಸಂತಿ ಗಂಗಾಧರ್,  ಅಮ್ಮ ಸ್ವೀಟ್ಸ್ ಮಾಲಕ ಜನಾರ್ದನ, ಅವರ ಪತ್ನಿ ವನಿತಾ ಸಹೋದರ ರವೀಂದ್ರ, ಪುತ್ರಿ ಜಿಶಾ ಉಪಸ್ಥಿತರಿದ್ದರು.

ನಿತಿನ್ ಶೆಟ್ಟಿ ಶಂಭೂರು  ಪ್ರಾಸ್ತಾವಿಕ ಮಾತನಾಡಿ ವಂದಿಸಿದರು. ಚೇತನ್ ಶೆಟ್ಟಿ ಮಂಗಳೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Leave a Comment