ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ನಗರದ ಬಂಗ್ರಕೂಳೂರಿನ ಗೋಲ್ಡ…ಫಿಂಚ್ ಮೈದಾನದಲ್ಲಿ ನಡೆಯುವ ಸೆ.2ರ ಕಾರ್ಯಕ್ರಮದ ಯಶಸ್ಸಿಗೆ ದ.ಕ.ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಹಿತ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಕೆಲವು ಫಲಾನಭವಿಗಳಿಗೆ ಯೋಜನೆಗಳ ಹಸ್ತಾಂತರ ಕಾರ್ಯಕ್ರಮವೂ ನಡೆಯಲಿದೆ. ಮಧ್ಯಾಹ್ನ ಒಂದು ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿರುವುದರಿಂದ ಸಾರ್ವಜನಿಕರು ಕನಿಷ್ಠ ಒಂದೂವರೆ ಗಂಟೆ ಮುಂಚಿತವಾಗಿ ಪಾಲ್ಗೊಳ್ಳಬೇಕು. ಸುರಕ್ಷತೆಯ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳನ್ನು ಆಹ್ವಾನಿಸಲಾಗಿದೆ. ಫಲಾನುಭವಿಗಳಲ್ಲದೆ ಸಾರ್ವಜನಿಕರು ಕೂಡ ಮುಕ್ತವಾಗಿ ಭಾಗವಹಿಸಬಹುದಾಗಿದೆ ಎಂದರು.
ಪ್ರಧಾನಿ ಕಾರ್ಯಕ್ರಮ ಮುಗಿದು, ಸಾರ್ವಜನಿಕರು ಮರಳಿದ ಬಳಿಕವೇ ಎಲ್ಲ ಗಣೇಶ ಮೂರ್ತಿ ವಿಸರ್ಜನೆ ಮಾಡುವಂತೆ ಮನವಿ ಮಾಡಿದ್ದು, ಸ್ಥಳೀಯ ಪೊಲೀಸರು ಮತ್ತು ಸಂಘಟಕರು ವ್ಯವಸ್ಥೆ ಮಾಡುತ್ತಾರೆ. ಗಣೇಶ ಮೂರ್ತಿ ವಿಸರ್ಜನೆ, ಹೆಚ್ಚಿನ ಬಸ್ಗಳು ಪ್ರಧಾನಿ ಕಾರ್ಯಕ್ರಮಕ್ಕೆ ಬುಕ್ಕಿಂಗ್, ನಗರದೊಳಗೆ ಸಂಚಾರದಲ್ಲಿ ಸಮಸ್ಯೆ, ಮಳೆ ಸಂಭದ ಇತ್ಯಾದಿಗಳ ಒತ್ತಡದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದರು.
ಪ್ರಧಾನಿಗಳ ಸುರಕ್ಷಿತ ಮತ್ತು
ಸುಲಲಿತ ಸಂಚಾರ, ಸಿಎಂ ಸೇರಿದಂತೆ ಇತರ ಪ್ರಮುಖ ಸುರಕ್ಷೆ, ಪ್ರತಿಯೊಬ್ಬ ಸಾರ್ವಜನಿಕರಿಗೂ ಅತೀ ಹತ್ತಿರದಿಂದ ವಾಹನದಿಂದ ಇಳಿದು ಸಭಾ ಕಾರ್ಯಕ್ರಮಕ್ಕೆ ಬರಲು ಅವಕಾಶ, ಕಾರ್ಯಕ್ರಮ ಮುಗಿದ ಬಳಿಕ ಸುರಕ್ಷಿತವಾಗಿ ಮನೆಗೆ ತಲುಪುವ ಹಿನ್ನೆಲೆಯಲ್ಲಿ ಸಂಚಾರ ನಿಷೇಧ, ಸಂಚಾರ ಬದಲಾವಣೆ, ಪಾರ್ಕಿಂಗ್ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಪೊಲೀಸ್ ಕಮೀಷನರ್ ಶಶಿಕುಮಾರ್ ಹೇಳಿದರು.
ಪ್ರಧಾನಮಂತ್ರಿಗಳು ಎಸ್ಪಿಜಿ ಭದ್ರತೆ ಹೊಂದಿದವರು. ಹಾಗಾಗಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಯಾವುದೇ ಆಕ್ಷೇಪಾರ್ಹ ವಸ್ತುಗಳು ಅಥವಾ ಮಾರಕಾಯುಧಗಳನ್ನು ತರುವಂತಿಲ್ಲ. ಸಿಎಆರ್, ಕೆಎಸ್ಆರ್ಪಿ, ಹೋಮ್ಗಾಡ್ ಸಹಿತ ಗೃಹ ಇಲಾಖೆಗಳ ವಿವಿಧ ಘಟಕಗಳ ಅಧಿಕಾರಿ, ಸಿಬ್ಬಂದಿಯನ್ನು ಬಂದೋಬಸ್ತ್ಗೆ ನಿಯೋಜಿಸಲಾಗುತ್ತದೆ ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದರು.
ಕೋಸ್ಟ್ ಗಾರ್ಡ್ ಸಮುದ್ರದಲ್ಲೂ ಕಣ್ಗಾವಲು ಇರಿಸಿದೆ. ಡ್ರೋಣ್ ಹಾರಾಟ ಬಗ್ಗೆ ಗರುಡ ಪಡೆ ಕಣ್ಗಾವಲು ಇರಿಸಲಿದೆ. ರಾಜ್ಯದ ಇತರ ಕಡೆಯಿಂದ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕ್ಷಿಪ್ರ ಕಾರ್ಯಪಡೆ ಆಗಮಿಸಲಿದೆ. ಎಸ್ಪಿಜಿಯಿಂದ ತಾಲೀಮು, ಪೊಲೀಸ್ ಇಲಾಖೆಯಿಂದ ರೂಟ್ ಮಾರ್ಚ್ ನಡೆಸಲಾಗಿದೆ ಎಂದರು.















