ಬಂಟ್ವಾಳ: ರಮಾನಾಥ ರೈ ಅವರ ರಾಜಕೀಯ ಚಿಂತನೆಯ ಪರಿಣಾಮದಿಂದ ಹಿಂದೆ ಬಂಟ್ವಾಳದಲ್ಲಿ ಕೋಮುಗಲಭೆ, ಗೋಹತ್ಯೆ, ಹಿಂದೂ ಯುವಕರ ವಿರುದ್ಧ ಕೇಸ್ ಮೊದಲಾದ ಘಟನೆಗಳು ನಡೆದಿದ್ದು, 2017ರಲ್ಲಿ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರನ್ನು ಕಣ್ಣೀರು ಹಾಕಿಸಿ ನಿಂದನೆ ಮಾಡಿದ ಕೀರ್ತಿಯೂ ರೈ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಹೇಳಿದರು.
ಅವರು ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ರೈ ಅವರು 2018ರ ಚುನಾವಣೆಗೆ ಮೊದಲು ಬಂಟ್ವಾಳದಲ್ಲಿ 1 ಸಾವಿರ ಕೋ.ರೂ.ಗಳ ಅಭಿವೃದ್ಧಿ ಮಾಡಿರುವುದಾಗಿ ಬಿ.ಸಿ.ರೋಡು ಸರ್ಕಲ್ನಲ್ಲಿ ಬ್ಯಾನರ್ ಹಾಕಿರುವ ಜತೆಗೆ ಪತ್ರಿಕೆಗಳಲ್ಲಿ ಹೇಳಿಕೆ ನೀಡಿದ್ದರು. ಈಗ 5 ಸಾವಿರ ಕೋ.ರೂ.ತಂದಿದ್ದೇನೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಉಳಿದ 4 ಸಾವಿರ ಕೋಟಿ ಎಲ್ಲಿಗೆ ಹೋಯಿತು ಎಂಬುದನ್ನು ನೀವು ಹೇಳಬೇಕು.
ಬಂಟ್ವಾಳ ಕ್ಷೇತ್ರದಲ್ಲಿ ಜನತೆ ಬುದ್ಧಿವಂತಿಕೆ, ಪ್ರಜ್ಞಾವಂತಿಕೆ ಮೆರೆದು ರಾಜೇಶ್ ನಾಯ್ಕ್ ಅವರನ್ನು ಗೆಲ್ಲಿಸಿದ್ದು, ಈ ಬಾರಿ ಮತ್ತೆ ಗೆಲ್ಲಿಸಲಿದ್ದಾರೆ. ಕಂಕನಾಡಿ ಗರಡಿಯಲ್ಲಿ ಪೂಜಾರಿ ಅವರನ್ನು ಕಣ್ಣೀರು ಹಾಕಿಸಿರುವುದನ್ನು ಇಡೀ ಜಿಲ್ಲೆಯ ಮತದಾರರು, ಬಿಲ್ಲವರು ಮರೆತ್ತಿಲ್ಲ. ಈಗ ಪದ್ಮರಾಜ್ ಎನ್ನುವವರನ್ನು
ಬಂಟ್ವಾಳಕ್ಕೆ ಕರೆಸಿ ಮತಗಳಿಕೆಗೆ ರೈ ಅವರು ಪ್ರಯತ್ನಿಸುತ್ತಿದ್ದಾರೆ. ಪದ್ಮರಾಜ್ರಂತಹ ನೂರು ಮಂದಿ ಕೆಪಿಸಿಸಿಯಲ್ಲಿ ಪ್ರಧಾನ ಕಾರ್ಯದರ್ಶಿಗಳಿದ್ದಾರೆ.
ರಾಜಸ್ಥಾನ, ಹಿಮಾಚಲ ಪ್ರದೇಶಗಳಲ್ಲಿ ಗ್ಯಾರಂಟಿಗಳನ್ನು ಜಾರಿ ಮಾಡದ ಕಾಂಗ್ರೆಸ್ ಕರ್ನಾಟಕದಲ್ಲಿಯೂ ಯಾವುದೇ ಗ್ಯಾರಂಟಿಗಳನ್ನು ಈಡೇರಿಸುವುದಿಲ್ಲ. ಅವರು ಉಚಿತಗಳ ಮೂಲಕ ರಾಜ್ಯವನ್ನು ಭಿಕ್ಷುಕರ ರಾಜ್ಯ ಮಾಡಲು ಹೊರಟಿದ್ದಾರೆ. ಕೆಎಸ್ಆರ್ಟಿಸಿ ನಷ್ಟದಲ್ಲಿದ್ದು, ಉಚಿತ ಪ್ರಯಾಣಕ್ಕೆ ಇಟಲಿಯಿಂದ ಬಸ್ಸು ತರುತ್ತಾರೆಯೇ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ, ಮಂಡಲ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ಕುಮಾರ್ ರೈ ಬೋಳಿಯಾರು, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ, ಕ್ಷೇತ್ರ ಪ್ರವಾಸಿ ಹರಿದಾಸ್, ಮಾಧ್ಯಮ ಪ್ರಮುಖ್ ರಂಜಿತ್ ಮೈರ ಉಪಸ್ಥಿತರಿದ್ದರು.















