ಬಂಟ್ವಾಳ: ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ಶ್ರೀ ಬೆಳ್ಳಿಪ್ಪಾಡಿ ರಮಾನಾಥ ರೈ ಅಭಿನಂದನಾ ಸಮಿತಿ ವತಿಯಿಂದ ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ಶ್ರೀ ಬೆಳ್ಳಿಪ್ಪಾಡಿ ರಮಾನಾಥ ರೈಯವರಿಗೆ ಅಭಿನಂದನಾ ಸಮಾರಂಭ ಮಂಗಳವಾರ ಬಿ.ಸಿ.ರೋಡಿನ ಸ್ಪರ್ಶಾಕಲಾ ಮಂದಿರದಲ್ಲಿ ನಡೆಯಿತು. ಎಡನೀರು ಮಠದ ಶಂಕರಾಚಾರ್ಯ, ತೋಟಕಾಚಾರ್ಯ ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿ ಕಾರ್ಯಕ್ರಮದಲ್ಲಿ ದೀಪಪ್ರಜ್ವಲನೆಗೈದು ಆಶೀರ್ವಚನ ನೀಡಿದರು. ಹರಿಕೃಷ್ಣ ಪುನರೂರು ಹಾಗೂ ರಮಾನಾಥ ರೈ ಇಬ್ಬರೂ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡವರು. ಧಾರ್ಮಿಕ ನೆಲೆಗಟ್ಟಿನಲ್ಲಿ ಬದುಕಿದ ಈರ್ವರು, ಜಾತ್ಯಾತೀತವಾಗಿ, ಪಕ್ಷತೀತವಾಗಿ ಅಭಿನಂದಿಸಲ್ಪಟ್ಟಿರುವುದು ಸಂತೋಷ ನೀಡಿದೆ. ಸಮಾಜವನ್ನು ಒಂದುಗೂಡಿಸುವುದು ಧರ್ಮ, ಅವರು ನೀಡಿದ ಸೇವೆ ಇಂದು ಅವರ ಮೇಲಿನ ಅಭಿಮಾನದಿಂದ ಜನರನ್ನು ಇಲ್ಲಿ ಒಂದುಗೂಡಿಸಿದೆ ಎಂದರು.
ಸಾರ್ವಜನಿಕ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬಿ ರಮಾನಾಥ ರೈ, ಎಲ್ಲಾ ಜಾತಿ-ಧರ್ಮಗಳ ಸಹಬಾಳ್ವೆಗೆ ಪೂರಕವಾಗಿ ಸ್ಪಂದಿಸಿ ಎಲ್ಲರ ಪ್ರೀತಿಗೆ ಪಾತ್ರನಾಗಿ, ದೇವರ ಪ್ರೀತಿಗೂ ಪಾತ್ರನಾಗಲು ಪ್ರಯತ್ನಿಸಿದ್ದೇನೆ, ಬಾಲ್ಯದಿಂದಲೇ ರಾಮೇಶ್ವರ ಕ್ಷೇತ್ರದ ಪರಮ ಭಕ್ತನಾಗಿದ್ದ ನನ್ನ ತಂದೆ-ತಾಯಿ ನೀಡಿದ ಸಂಸ್ಕಾರದಂತೆ ನನ್ನ ವೈಯಕ್ತಿಕ ಬದುಕಿನಲ್ಲಿ ಶ್ರೀರಾಮನ ಆದರ್ಶ ಅಳವಡಿಸಿಕೊಂಡಿದ್ದೇನೆಯೇ ವಿನಃ ರಾಜಕೀಯದಲ್ಲಿ ಶ್ರೀರಾಮನ ಹೆಸರು ಬಳಸಿಕೊಂಡಿಲ್ಲ ಎಂದು ಹೇಳಿದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿ ಮನುಷ್ಯ ತನ್ನನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮ ಸಂಪಾದನೆಯ ಬಹುಭಾಗವನ್ನು ಬಡವರ ಏಳಿಗೆಗೆ ನೀಡಿದಾಗ ಹೆಚ್ಚಿನ ಪುಣ್ಯ ಸಂಪದಾನೆಯಾಗುತ್ತದೆ ಎಂದ ಅವರು ರಮಾನಾಥ ರೈ ಜೊತೆ ಅಭಿನಂದನೆ ಸಿಕ್ಕಿರುವುದು ಖುಷಿ ಕೊಟ್ಟಿದೆ ಎಂದು ತಿಳಿಸಿದರು.
ದ.ಕ. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹರಿಕೃಷ್ಣ ಪುನರೂರು ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬಿ. ರಮನಾಥ ರೈ ಅವರ ಅಭಿನಂದನಾ ಭಾಷಣ ಮಾಡಿದರು. ಈ ಸಂದರ್ಭ ಶ್ರೀ ಸಚ್ಚಿದಾನಮದ ಭಾರತೀ ಸ್ವಾಮೀಗಳು ಅಭಿನಂದನಾ ಗ್ರಂಥ
ಬಿಡುಗಡೆ ಮಾಡಿದರು.ಅಭಿನಂದನಾ ಸಮಿತಿ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬಡಗಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘು ಎಲ್. ಶೆಟ್ಟಿ, ಗೌರವಾಧ್ಯಕ್ಷರಾದ ರಘುನಾಥ ಸೋಮಯಾಜಿ, ಶಿವಪ್ರಸಾದ್ ಅಜಿಲರು ಅಳದಂಗಡಿ, ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು, ಕೋಶಾಧಿಕಾರಿ ರಾಮಗಣೇಶ್ ಪ್ರಭು ಕೈಕುಂಜೆ ಉಪಸ್ಥಿತರಿದ್ದರು.
ಕೈಯ್ಯೂರು ನಾರಾಯಣ ಭಟ್ ಸ್ವಾಗತಿಸಿದರು. ಅಭಿನಂದನ ಗ್ರಂಥ ಸಮಿತಿ ಸಂಪಾದಕ ಪ್ರೊ.ರಾಜಮಣಿ ರಾಮಕುಂಜ ಅನಿಸಿಕೆ ವ್ಯಕ್ತಪಡಿಸಿದರು. ಮಹಾಲಿಂಗ ಭಟ್, ಜಯರಾಮ ಪೂಜಾರಿ ಸನ್ಮಾನ ಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು ವಂದಿಸಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಪ್ರಕಾಶ್ ಕಾರಂತ್ ನರಿಕೊಂಬು, ಸಹ ಸಂಚಾಲಕ ಸುಧಾಕರ ಆಚಾರ್ಯ ಮಾರ್ನಬೈಲು, ಉಪಾಧ್ಯಕ್ಷರಾದ ಸುನೀಲ್ ಬಿ., ಪ್ರವೀಣ್ ಜಕ್ರಿಬೆಟ್ಟು, ವಿಶ್ವನಾಥ ಬೆಳ್ಚಾಡ ಕೂಡೂರು, ಸ್ವಾಗತ ಸಮಿತಿಯ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಆರ್ಥಿಕ ಸಮಿತಿ ಉಮೇಶ್ ನೆಲ್ಲಿಗುಡ್ಡೆ, ಗೌರವ ಸಲಹೆಗಾರರಾದ ಭುವನೇಶ್ ಪಚ್ಚಿನಡ್ಕ, ರಮೇಶ್ ನಾಯಕ್ ರಾಯಿ ಸಹಕರಿಸಿದರು.















