ಬಂಟ್ವಾಳ :ಆಕರ್ಷಕ ಮೆರವಣಿಗೆ.ಬ್ಯಾಂಡ್ ವಾಲಗದ ಅಬ್ಬರ,ಶಾಲೆಯಲ್ಲಿ ತೋರಣ ಕಟ್ಟಿ ರಂಗೋಲಿ ಬಿಡಿಸಿ, ರಜೆ ಕಳೆದು ಬಣ್ಣ ಬಣ್ಣದ ಸಮವಸ್ತ್ರದೊಂದಿಗೆ ಸಂಭ್ರಮದಿಂದ ಶಾಲೆಯತ್ತ ಹೆಜ್ಜೆ ಹಾಕಿದ ಮಕ್ಕಳಿಗೆ ಶಿಕ್ಷಕಿಯರು ಆರತಿ ಬೆಳಗಿಸಿ ತಿಲಕವಿಟ್ಟರು,ಶಾಲಾ ಪರಿಸರದಲ್ಲಿ ಹಬ್ಬದ ವಾತಾವರಣ ಸೃಷ್ಟಿಮಾಡಿತ್ತು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾಭಿವೃದ್ಧಿ ಸಮಿತಿ ನೆತ್ತರಕೆರೆ ಹಾಗೂ ನವೋದಯ ಮಿತ್ರಕಲಾ ವೃಂದ ದ ಆಶ್ರಯದಲ್ಲಿ ನೆತ್ತರಕೆರೆ ಶಾಲೆಯಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಕಂಡ ಸನ್ನಿವೇಶ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮಾತನಾಡಿ,ಸಮುದಾಯದ ಪಾಲ್ಗೊಳ್ಳುವಿಕೆ ಇದ್ದಾಗ ಮಾತ್ರ ಶಾಲೆಯ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ನೆತ್ತರಕೆರೆ ಶಾಲೆ ಉತ್ತಮ ನಿದರ್ಶನ ಎಂದರು.
ಹೋಬಳಿ ಮಟ್ಟದಲ್ಲಿ ಒಂದು ಶಾಲೆಯನ್ನು ಮಾದರಿ ಶಾಲೆಯಾಗಿ ಸೂಚಿಸಬೇಕಿದ್ದು, ಇದರಿಂದ ನೆತ್ತರಕೆರೆ ಶಾಲೆಯ ಪ್ರತೀ ತರಗತಿಗೂ ಶಿಕ್ಷಕರ ನಿಯೋಜನೆ, ಕೊಠಡಿಗಳ ಲಭ್ಯತೆಯ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.
ಸರ್ಕಾರದ "ಮಾದರಿ ಶಾಲೆ" ಯೋಜನೆಗೆ ಬಂಟ್ವಾಳ ಹೋಬಳಿಯಿಂದ ನೆತ್ತರಕೆರೆ ಶಾಲೆಯನ್ನು ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನೆತ್ತರಕೆರೆ ಶಾಲೆಯಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಲಭಿಸುವುದರ ಜೊತೆಗೆ ಇಲ್ಲಿನ ವಿದ್ಯಾರ್ಥಿಗಳು ಸಮಾಜದ
ಆಸ್ತಿಯಾಗಲಿ ಎಂದರು.
ಈ ಸಂದರ್ಭದಲ್ಲಿ ಪೊಳಲಿ ರಾಮಕೃಷ್ಣ ತಪೋವನದ ವತಿಯಿಂದ ಕೊಡುಗೆಯಾಗಿ ನೀಡಿದ ಉಚಿತ ನೋಟ್ ಬುಕ್ ಹಾಗೂ ಶಿಕ್ಷಣ ಇಲಾಖೆಯ ಪಠ್ಯ ಪುಸ್ತಕವನ್ನು ಸಂಕೇತಿಕವಾಗಿ ಮಕ್ಕಳಿಗೆ ವಿತರಿಸಲಾಯಿತು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಕ್ಷೇತ್ರ ಸಮನ್ವಯಾಧಿಕಾರಿ ರಾಘವೇಂದ್ರ ಬಲ್ಲಾಳ್, ಶಿಕ್ಷಣ ಸಂಯೋಜಕಿ ಸುಜಾತ ಕುಮಾರಿ, ದೈಹಿಕ ಶಿಕ್ಷಣ ಪರಿವೀಕ್ಷಕ ವಿಷ್ಣುಮೂರ್ತಿ ಹೆಬ್ಬಾರ್, ಡಯಟ್ ನ ಉಪನ್ಯಾಸಕರಾದ ಪೀತಾಂಬರ, ನವೋದಯ ಮಿತ್ರ ಕಲಾವೃಂದದ ಅಧ್ಯಕ್ಷ ಸುರೇಶ್ ಭಂಡಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜ್ಯೋತೀಂದ್ರ ಶೆಟ್ಟಿ, ನವೀನ್ ಚಂದ್ರ ಶೆಟ್ಟಿ ವೇದಿಕೆಯಲ್ಲಿದ್ದರು.
ಪ್ರಮುಖರಾದ ರಾಧಾಕೃಷ್ಣ ತಂತ್ರಿ,ಪಿ ಸುಬ್ರಮಣ್ಯ ರಾವ್, ವಿಠ್ಠಲ್ ಸಾಲ್ಯಾನ್, ಪುರುಷೋತ್ತಮ ಕೊಟ್ಟಾರಿ, ಭಾಸ್ಕರ್ ಎನ್, ಸಂತೋಷ್ ಕುಮಾರ್, ಚಂದ್ರಹಾಸ ಎನ್, ಜಗದೀಶ್ ಬಂಗೇರ, ಲೋಕೇಶ್ ಎನ್ ಹಾಗೂ ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಪೋಷಕರು ಮತ್ತಿರರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಸಿಲ್ವಿಯಾ ಬ್ರ್ಯಾಗ್ಸ್ ಸ್ವಾಗತಿಸಿ, ಎಸ್.ಡಿ.ಎಂ.ಸಿ ಅಧ್ಯಕ್ಷ ದಾಮೋದರ ನೆತ್ತರಕೆರೆ ವಂದಿಸಿ,ಶಿಕ್ಷಕಿ ಮೋಹಿನಿ ಕಾರ್ಯಕ್ರಮ ನಿರ್ವಹಿಸಿದರು.














