Coastal Bulletin

ಮಂಗಳೂರು (ಆ.13): ಸಂಚಾರಿ ಠಾಣಾ ಎಎಸ್ ಐ ಒಬ್ಬರು ಸಿಟಿ ಬಸ್ ನಿರ್ವಾಹಕನಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬಸ್ ಸಿಬ್ಬಂದಿ ಬಸ್ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ ಘಟನೆ ಕರ್ನಾಟಕ-ಕೇರಳ ಗಡಿ ಭಾಗದ ತಲಪಾಡಿಯಲ್ಲಿ ನಡೆದಿದೆ. ತಲಪಾಡಿ- ಸ್ಟೇಟ್ ಬ್ಯಾಂಕ್ ಚಲಿಸುವ ಬಸ್ ಬಂದ್ ನಡೆಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಉಷಾ ಹೆಸರಿನ ಸಿಟಿ ಬಸ್ ನಿರ್ವಾಹಕ ರಾಜು ಎಂಬಾತನನ್ನು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಜೆಪ್ಪು ಸಂಚಾರಿ ಠಾಣೆಯ ಎಎಸ್ ಐ ಆಲ್ಬಟ್ ೯ ಲಸ್ರಾದೊ ಇಂದು ಬೆಳಗ್ಗೆ ತಲಪಾಡಿ ಬಳಿ ಸಿಟಿ ಬಸ್ಸುಗಳ ತಡೆದು ಕೇಸು ಹಾಕುತ್ತಿದ್ದರು. ಈ ನಡುವೆ ನಿರ್ವಾಹಕನೋರ್ವನಿಗೆ ASI ಹಲ್ಲೆ ನಡೆಸಿದ್ದಾರೆ ಎಂದು ಬಸ್ ಸಿಬ್ಬಂದಿ ದೂರಿದ್ದಾರೆ. ಕೃತ್ಯ ಖಂಡಿಸಿದ ಬಸ್ ಸಿಬ್ಬಂದಿ ಬೆಳಗ್ಗಿನಿಂದ ಮಧ್ಯಾಹ್ನವರೆಗೂ ಬಸ್‌ ತಡೆದು ಪ್ರತಿಭಟನೆ ನಡೆಸಿದ್ದಾರೆ. ಮಂಗಳೂರಿನಿಂದ ತಲಪಾಡಿಗೆ ಬರುವ ವೇಳೆ ವೇಗವಾಗಿ ಬಂದ ಕಾರಣಕ್ಕೆ ಎಎಸ್ಸೈ ಬಸ್ ತಡೆದಿದ್ದು, ಓವರ್ ಸ್ಪೀಡ್ ಗೆ 1000 ಸಾವಿರ ಫೈನ್ ಹಾಕಿದ್ದಾರೆ. ಅಲ್ಲದೇ ಬಸ್ಸಿನ ದಾಖಲೆ ಕೇಳಿದಾಗ ಬಸ್ ಚಾಲಕ ಇಲ್ಲ ಎಂದಿದ್ದು, ಈ ವೇಳೆ ಎಎಸ್ಸೈ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎನ್ನುವುದು ಬಸ್ ಸಿಬ್ಬಂದಿ ಆರೋಪ. 

ಕೆಲ ತಿಂಗಳುಗಳ ಹಿಂದೆ ಇದೇ ASI ಆಲ್ಬಟ್೯ ಲಸ್ರಾದೋ ತೊಕ್ಕೊಟ್ಟು ಫ್ಲೈಓವರಿನಡಿ ಕಾರೊಂದರಲ್ಲಿ ಸ್ಟಿಕರ್ ಇದ್ದ ಹಿನ್ನೆಲೆಯಲ್ಲಿ

ದಂಡ ಹಾಕಿದ್ದರು. ಆದರೆ ಕಾರಿನಲ್ಲಿ ಸ್ವಾಮಿ ಕೊರಗಜ್ಜ ಸ್ಟಿಕ್ಕರ್ ಇದ್ದು, ಇದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಕಾರು ಮಾಲೀಕ ಸೇರಿದಂತೆ ಹಿಂದು ಸಂಘಟನೆ ಕಾರ್ಯಕರ್ತರು ತೊಕ್ಕೊಟ್ಟು ಜಂಕ್ಷನ್ನಿನಲ್ಲೇ ಪ್ರತಿಭಟನೆ ನಡೆಸಿ ಎಎಸ್ ಐ ವಜಾಗೊಳಿಸಲು ಆಗ್ರಹಿಸಿದ್ದರು.

ಇನ್ನು ಮಂಗಳೂರಿನಲ್ಲಿ ಖಾಸಗಿ ಬಸ್ಸುಗಳದ್ದೇ ಪಾರುಪತ್ಯವಿದ್ದು, ಬಹುತೇಕ ಇಡೀ ನಗರವನ್ನು ಖಾಸಗಿ ಬಸ್ಸುಗಳೇ ಆವರಿಸಿಕೊಂಡಿದೆ. ಅಲ್ಲದೇ ಇವರಿಗೆ ಟೈಮಿಂಗ್ಸ್ ಇರೋ ಕಾರಣ ಸಮಯ ಹೊಂದಾಣಿಕೆ ಮಾಡಲು ಅತೀ ವೇಗವಾಗಿ ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿದ ಉದಾಹರಣೆಗಳೂ ಸಾಕಷ್ಟು ಇವೆ. ನಗರ ಪ್ರದೇಶಗಳಲ್ಲೂ ವೇಗದ ಮಿತಿ ಮೀರಿ ಬಸ್ಸುಗಳು ಸಂಚರಿಸುತ್ತವೆ. ಇದರಿಂದ ಹಲವು ಅಪಘಾತಗಳು ನಡೆದು ಅನೇಕರು ಪ್ರಾಣ ಕಳೆದುಕೊಂಡಿದ್ದು ಇದೆ‌. ಹೀಗಾಗಿ ಕೆಲವೊಮ್ಮೆ ಪೊಲೀಸರು ತಡೆದು ನಿಲ್ಲಿಸಿ ಫೈನ್ ಹಾಕುವ ಕೆಲಸ ಮಾಡ್ತಾರೆ. ಈ ನಡುವೆ ಕೆಲವೊಂದು ಕಡೆ ಪೊಲೀಸರು ಅನಗತ್ಯ ಕಿರುಕುಳ ನೀಡ್ತಾರೆ ಅನ್ನೋದು ಬಸ್ ಸಿಬ್ಬಂದಿ ಆರೋಪ.

Leave a Comment