Coastal Bulletin

ಬಂಟ್ವಾಳ:ತಾಲೂಕಿನ ನೆತ್ರಕೆರೆಯ ಹೊಳ್ಳರ ಬೈಲಿನಲ್ಲಿ ಆರಂಭಗೊಂಡಿರುವ ಸ್ವಸ್ತಿಕ ನ್ಯಾಷನಲ್ ಸ್ಕೂಲ್ ನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಬಿ.ಸಿ.ರೋಡ್ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಹಾಗೂ ತುಳು ಬದುಕು ವಸ್ತುಸಂಗ್ರಹಾಲಯಕ್ಕೆ ಶಿಬಿರಾರ್ಥಿಗಳು ಭೇಟಿ ನೀಡಿ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಮತ್ತು ಡಾ. ಆಶಾಲತಾ ಸುವರ್ಣ ದಂಪತಿಯಿಂದ ವಿವರವಾದ ಮಾಹಿತಿ ಪಡೆದರು.

ಪತ್ರಕರ್ತ ಹರೀಶ ಮಾಂಬಾಡಿ ಶಿಬಿರ ಉದ್ಘಾಟಿಸಿ ಮಾತನಾಡಿ, ನಾವಿಂದು ಇತಿಹಾಸದಲ್ಲಿ ರಾಜಮಹಾರಾಜರ ಬದುಕನ್ನು ಅಧ್ಯಯನ ಮಾಡಿದ್ದೇವೆ, ಆದರೆ ಜನಸಾಮಾನ್ಯರ ಬದುಕು, ನಮ್ಮ ಪೂರ್ವಜರು ಬದುಕಿ ಬಾಳಿದ ರೀತಿಯನ್ನು ಅರಿಯಬೇಕಾದರೆ, ನಮ್ಮ ತುಳುನಾಡಿದ ಪ್ರಾಚೀನ ಇತಿಹಾಸವನ್ನು ತಿಳಿದುಕೊಳ್ಳಬೇಕಾದರೆ, ವಸ್ತುಸಂಗ್ರಹಾಲಯದ ಪ್ರತಿಯೊಂದು ಸಂಗ್ರಹದ ಅಧ್ಯಯನ ಮಾಡುವುದು ಅವಶ್ಯ, ಯಾವುದೇ ವಿದ್ಯಾಭ್ಯಾಸ ಮಾಡುವುದಿದ್ದರೂ ಇತಿಹಾಸದ ಅರಿವಿದ್ದರಷ್ಟೇ ಕಲಿಕೆ ಪರಿಪೂರ್ಣವಾಗಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಳ್ಳಿಗೆ ಗ್ರಾಪಂ ಉಪಾಧ್ಯಕ್ಷ ದಾಮೋದರ

ನೆತ್ರಕೆರೆ ವಹಿಸಿ ಮಾತನಾಡಿ, ತುಳು ಬದುಕಿನ ವಿವರಗಳನ್ನು ಪಡೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ನೆಲದ ಸಂಸ್ಕೃತಿಯ ಅರಿವು ಪಡೆಯುವುದು ಪ್ರಯೋಜನಕಾರಿ ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉದ್ಯಮಿ ಅಮ್ಟಾಡಿ ಗಣೇಶ್ ಹೊಳ್ಳ ಭಾಗವಹಿಸಿದ್ದರು. ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಅಧ್ಯಕ್ಷ ಡಾ. ರಾಘವೇಂದ್ರ ಹೊಳ್ಳ, ಶಿಬಿರಾಧಿಕಾರಿಗಳಾದ ವಿದ್ಯಾಲಕ್ಷ್ಮೀ ಶೆಟ್ಟಿ, ಘಟಕದ ನಾಯಕ ಶ್ರೀಹರಿ, ನಾಯಕಿ ಸುಶ್ಮಿತಾ ಉಪಸ್ಥಿತರಿದ್ದರು. ಜೀವಾ ಶೆಟ್ಟಿ ವಂದಿಸಿದರು. ಭುವನ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

Leave a Comment