ಮೂಡುಬಿದಿರೆ: ಶ್ರೀ ಕಾಶೀ ಮಠದ ಸಂಸ್ಥಾನದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಗೌಡ ಸಾರಸ್ವತ ಸಮಾಜದ ಇಂದಿನ ಉನ್ನತಿ ಮತ್ತು ಸಾಧನೆಗೆ ಕಾರಣಕರ್ತರು. ಘನ ಪಾಂಡಿತ್ಯವಿದ್ದರೂ ಮಗುವಿನ ಸರಳತೆಯೊಂದಿಗೆ ಶಿಷ್ಯವರ್ಗದ ಅಭಿವೃದ್ಧಿಗೆ ಸದಾ ಕಾಳಜಿ ವಹಿಸಿದವರು. ಜಿ.ಎಸ್.ಬಿ. ಸಮಾಜ ಬಾಂಧವರು ನಿತ್ಯಾನುಷ್ಠಾನ, ಧರ್ಮ ಶ್ರದ್ಧೆಯ ಮೂಲಕ ಗುರುವರ್ಯರ ಸಂಸ್ಕಾರಭರಿತ ಸಮೃದ್ಧಿಯ ಸಮಾಜದ ಚಿಂತನೆಯನ್ನು ಸಾಕಾರಗೊಳಿಸಬೇಕಾಗಿದೆ ಎಂದು ಉಡುಪಿಯ ವೇ.ಮೂ.ಎಂ. ಹರಿಪ್ರಸಾದ್ ಶರ್ಮ ಹೇಳಿದರು. ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸೋಮವಾರ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಆರನೇ ಆರಾಧನಾ ಮಹೋತ್ಸವದಲ್ಲಿ ಅವರು ಗುರು ಗುಣಗಾನ ನಡೆಸಿದರು.
ನಡೆದಾಡುವ ಭಗವಂತನಾಗಿದ್ದ ಗುರು ಸುಧೀಂದ್ರ ತೀರ್ಥ ಸ್ವಾಮೀಜಿಯವರು ಸದಾ ಶಿಷ್ಯರ ಸಂಕಷ್ಟಗಳಿಗೆ ಸ್ಪಂದಿಸಿದವರು. ಅವರ ಅನುಗ್ರಹದಿಂದಲೇ ಸಮಾಜ ಇಂದು ಸ್ವಾವಲಂಬಿಯಾಗಿ ಬೆಳೆದಿದೆ ಎಂದು ಕೆನರಾ ಎಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ಎಂ. ಗಣೇಶ ಕಾಮತ್ ಹೇಳಿದರು.
ಶ್ರೀ ದೇವಳದ ಶ್ರೀ ವೆಂಕಟರಮಣ ಭಜನಾ ಮಂಡಳಿಯ ವಜ್ರ ಮಹೋತ್ಸವದ ಅಂಗವಾಗಿ ಸಂಕೀರ್ತನಕಾರ ದಿ.ಎಂ. ಉಮೇಶ ಕಾಮತ್ ಅವರ ಜನ್ಮ ಅಮೃತ ವರ್ಷಾಚರಣೆ ಸಂಸ್ಮರಣಾರ್ಥ ಕಾರ್ಕಳದ ಹರಿದಾಸ ವೈ. ಅನಂತ ಪದ್ಮನಾಭ ಭಟ್ ಶ್ರೀ ವಿಷ್ಣು ಸಹಸ್ರನಾಮ ಪಾರಮ್ಯ- ಸ್ವರ್ಗಾರೋಹಣ ಹರಿಕಥಾ ಕಾಲಕ್ಷೇಪವನ್ನು ದೇವಳದ ಮಾಜಿ ಆಡಳಿತ ಮೊಕ್ತೇಸರ ಕೆ. ವಿಶ್ವನಾಥ ಪ್ರಭು ದೀಪ ಪ್ರಜ್ವಲನಗೊಳಿಸಿ ಚಾಲನೆ ನೀಡಿದರು. ದೇವಳದ ಆವರಣದಲ್ಲಿ ಗುರುವರ್ಯರ ಭಾವಚಿತ್ರದ
ಪಲ್ಲಕ್ಕಿ ಉತ್ಸವ ನಡೆಯಿತು.
ಮೂಡುವೇಣುಪುರಾಧೀಶ ಮಾಲಿಕೆಯಲ್ಲಿ ಎಂ. ಉಮೇಶ ಕಾಮತ್ ಅವರ ಭಜನೆಗಳ ಆಲ್ಬಂನಲ್ಲಿ ಹಾಡಿದ ಮಂಡಳಿಯ ಗಾಯಕರು, ಹಿನ್ನೆಲೆ ಸಹಕಾರ ನೀಡಿದವರನ್ನು ಎಂ. ಶಾಂತಾ ಉಮೇಶ್ ಕಾಮತ್ ಸಮ್ಮಾನಿಸಿದರು. ಸಹನಾ, ಹರೀಶ್ ಕಾಮತ್ ಸಹಿತ ಗಣ್ಯರು ಹರಿಕಥಾ ಬಳಗವನ್ನು ಗೌರವಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕ ಡಿ. ಶ್ರೀನಿವಾಸ ಕಿಣಿ ಅವರನ್ನು ಸಮ್ಮಾನಿಸಲಾಯಿತು. ದೇವಳದ ಮೊಕ್ತೇಸರರಾದ ಟಿ.ರಘುವೀರ ಶೆಣೈ, ಮನೋಜ್ ಶೆಣೈ, ಬಿ.ರಾಘವೇಂದ್ರ ಕಾಮತ್, ಭಜನಾ ಮಂಡಳಿಯ ಅಧ್ಯಕ್ಷ ವಿಘ್ನೇಶ್ ಪ್ರಭು, ಎಂ.ಸಿ.ಎಸ್. ಬ್ಯಾಂಕಿನ ನಿರ್ದೇಶಕ ಎಂ. ಚಂದ್ರಶೇಖರ್ ,ಪ್ರಾರ್ಥನಾ ಗಣೇಶ್ ಕಾಮತ್, ಕೆ.ರೂಪಾ ರಮಾನಂದ ಪೈ ಮತ್ತಿತರರು ಉಪಸ್ಥಿತರಿದ್ದರು. ಎಂ. ನಾಗೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.













