ಮಂಗಳೂರು: ಮ್ಯಾನ್ಮಾರ್ ಗಡಿಯಲ್ಲಿನ ಐಸಿಪಿ, ಮೊರೇಹ್ (ಮಣಿಪುರ)ದಲ್ಲಿನ ಗೇಟ್ 1 ಮತ್ತು 2ನ್ನು ಮೇ 20ರಿಂದ ತೆರೆದು ವ್ಯಾಪಾರ ಪುನರಾರಂಭಕ್ಕೆ ಅವಕಾಶ ಕಲ್ಪಿಸಿಲಾಗಿದ್ದರೂ, ಇತರ ವಸ್ತುಗಳ ಜತೆ ಸಾಂಬಾರು ವಸ್ತುಗಳ ಹೆಸರಿನಲ್ಲಿ ಅಡಕೆ, ಕಾಳುಮೆಣಸು ಕೂಡ ಕಡಿಮೆ ಬೆಲೆಗೆ ಆಮದಾಗುತ್ತಿದೆ. ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ಗೆ ಅಡಕೆ ಬೆಳೆಗಾರರ ಅಂತಾರಾಜ್ಯ ಸಹಕಾರ ಸಂಸ್ಥೆ 'ಕ್ಯಾಂಪ್ಕೋ' ಪತ್ರ ಬರೆದಿದೆ.
ಈಗಾಗಲೇ ಭಾರತ ಅಡಕೆ ಮತ್ತು ಕಾಳುಮೆಣಸು ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿದೆ. ಈ ವಸ್ತುಗಳು ಒಳ ಬರಲಾರಂಭಿಸಿದರೆ ಭಾರತದ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿ ಬೆಳೆಗಾರರ ಹಿತಕ್ಕೆ ಹಾನಿಯಾಗಲಿದೆ. ಆದ್ದರಿಂದ ತಾವು ಈ ಬಗ್ಗೆ ತಕ್ಷಣ ಗಮನ ಹರಿಸಿ ಮ್ಯಾನ್ಮಾರ್ ಗಡಿಯಲ್ಲಿನ ಮಣಿಪುರ ಗೇಟುಗಳ ಮೂಲಕ ಅಡಕೆ ಮತ್ತು ಕಾಳುಮೆಣಸು ಒಳನುಸುಳಿ ದೇಶೀಯ ಮಾರುಕಟ್ಟೆ ಪ್ರವೇಶಿಸದಂತೆ ನಿರ್ಬಂಧಿಸಬೇಕು. ಈ ಸಂಬಂಧ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ವಿದೇಶಾಂಗ ಸಚಿವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿ ಮತ್ತು ಈಶಾನ್ಯ ರಾಜ್ಯಗಳ ಬೇಡಿಕೆಯಂತೆ ನೆರೆಯ ದೇಶಗಳ ಜತೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಿದೇಶಾಂಗ ವ್ಯವಹಾರಗಳ ಇಲಾಖೆ(ಬಿಎಂ ವಿಭಾಗ) ಮೇ 20ರಂದು ಹೊರಡಿಸಿರುವ ಅಧಿಸೂಚನೆಯಡಿ ಮಣಿಪುರದ ಮೊರೇಹ್ನ ಐಸಿಪಿಯಲ್ಲಿನ ಗೇಟ್ ನಂ. 1 ಮತ್ತು 2ನ್ನು ತೆರೆಯಲು ಸೂಚಿಸಿದೆ.
2020ರಿಂದ ಈ ಗೇಟುಗಳನ್ನು ಬಂದ್ ಮಾಡಲಾಗಿತ್ತು.
ಈ ಕ್ರಮದಿಂದ ಒಟ್ಟಾರೆ ವ್ಯಾಪಾರ ವಹಿವಾಟಿಗೆ ಉತ್ತೇಜನ ಲಭಿಸಿದ್ದರೂ ಅಡಿಕೆ ಮತ್ತು ಕಾಳು ಮೆಣಸು ಕೂಡ ಈ ಮಾರ್ಗದಲ್ಲಿ ಒಳನುಸುಳಲು ಆರಂಭವಾಗಿರುವುದು ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಕ್ಯಾಂಪ್ಕೋ ವಿದೇಶಾಂಗ ಸಚಿವರ ಗಮನ ಸೆಳೆದಿದೆ.
ಅಡಿಕೆ ಈ ಹಿಂದೆ ಸಿಲ್ಚಾರ್, ಅಸ್ಸಾಂ, ಫಾಲಕಾಂತ, ಪಶ್ಚಿಮಬಂಗಾಳ ಮೂಲಕ ಬರ್ಮಾದಿಂದ ರಾಜಾರೋಷವಾಗಿ ಕಳ್ಳಮಾರ್ಗದಲ್ಲಿ ಗಡಿಯೊಳಗೆ ನುಸುಳುತ್ತಿತ್ತು. ಬೆಳೆಗಾರರಿಗೆ ಇದರಿಂದ ತೀವ್ರ ಸಂಕಷ್ಟ ಎದುರಾಗಿತ್ತು. ಇದನ್ನು ಮನಗಂಡ ಕೇಂದ್ರ ಸರಕಾರ ಶೇ. 108ರಷ್ಟು ಆಮದು ಸುಂಕ ಹೇರುವ ಮೂಲಕ ಕಿಲೋವೊಂದರ ಮೇಲೆ 251 ರೂ. ವಿಧಿಸಿತ್ತು. ಇದರಿಂದಾಗಿ ಅಡಿಕೆ ಮಾರುಕಟ್ಟೆ ಸ್ಥಿರತೆ ಕಾಣುವಂತಾಗಿತ್ತು ಎಂಬ ಅಂಶವನ್ನೂ ಕ್ಯಾಂಪ್ಕೋ ಮನವಿಯಲ್ಲಿ ವಿದೇಶಾಂಗ ಸಚಿವರ ಗಮನಕ್ಕೆ ತಂದಿದೆ.
ಇದೀಗ ಅಡಿಕೆ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ. ಅಡಿಕೆ ಕಿಲೋಗೆ ಉತ್ಪಾದನಾ ವೆಚ್ಚ 360 ರೂ.ಗೂ ಅಧಿಕವಾಗಿದೆ. ಆದ್ದರಿಂದ ಈ ಗರಿಷ್ಠ ಮೊತ್ತವನ್ನು ಆಮದು ಮೇಲೆ ನಿಗದಿಪಡಿಸಬೇಕು ಎಂದು ಕೊಡ್ಗಿ ತಿಳಿಸಿದ್ದಾರೆ.













