ಬಂಟ್ವಾಳ: ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಇದರ ಆಶ್ರಯದಲ್ಲಿ ಜ.19 ರಂದು ನಡೆಯಲಿರುವ ಬಂಟ್ವಾಳ ತಾಲೂಕು ಮಟ್ಟದ ಕೋಟಿ ಚೆನ್ನಯ ಕ್ರೀಡೋತ್ಸವ- 2025ರ ಲಾಂಛನ ಬಿಡುಗಡೆ ಕಾರ್ಯಕ್ರಮ ಬಿ.ಸಿ.ರೋಡಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಡಿ. 8ರಂದು ಭಾನುವಾರ ನಡೆಯಿತು.
ಕುದ್ರೋಳಿ ಗೋಕರ್ಣ ದೇವಸ್ಥಾನದ ಟ್ರಸ್ಟಿ, ಉದ್ಯಮಿ ಜಗದೀಪ್ ಸುವರ್ಣ ಲಾಂಛನ ಬಿಡುಗಡೆಗೊಳಿಸಿದರು. ಬಳಿಕ ಸಭಾಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಬಿಲ್ಲವ ಸಮಾಜದ ಸರ್ವರು ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಬೇಕು. ಈ ಮೂಲಕ ಸಮಾಜದ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ರಾರಾಜಿಬೇಕು ಎಂದು ಶುಭ ಹಾರೈಸಿದರು. ಬಳಿಕ ಅವರು ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲೂಕಿನ ಬಿಲ್ಲವರು ಸಂಘಟಿತರಾಗುವ ಉದ್ದೇಶದಿಂದ ಈ ಕ್ರೀಡಾಕೂಟ ಆಯೋಜಿಸಲಾಗಿದೆ. ಕ್ರೀಡಾಕೂಟವನ್ನು ಶಿಸ್ತುಬದ್ದವಾಗಿ, ಯಶಸ್ವಿಯಾಗಿ ನಡೆಸಲು ಬಿಲ್ಲವ ಸಮುದಾಯದ ಪ್ರತಿಯೊಬ್ಬರು ಸಹಕಾರ ನೀಡುವಂತೆ ಮನವಿ ಮಾಡಿದರು.
ಕೋಟಿ ಚೆನ್ನಯ ಕ್ರೀಡೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್
ಕ್ರೀಡಾಕೂಟದ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಅಧ್ಯಕ್ಷರಾದ ಕೆ.ಹರಿಕೃಷ್ಣ ಬಂಟ್ವಾಳ, ರಾಮಪ್ಪ ಪೂಜಾರಿ, ಚಂದ್ರಶೇಖರ ಪೂಜಾರಿ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ರಾಜೇಶ್ ಭಾಗವಹಿಸಿದ್ದರು.
ಪ್ರಮುಖರಾದ ಕೆ. ಸಂಜೀವ ಪೂಜಾರಿ, ಭುವನೇಶ್ ಪಚ್ಚಿನಡ್ಕ, ವಿಶ್ವನಾಥ ಬಿ, ಆನಂದ ಸಾಲ್ಯಾನ್, ರಾಜೇಶ್ ಸುವರ್ಣ, ಐತಪ್ಪ ಪೂಜಾರಿ, ವಿರೇಂದ್ರ ಅಮೀನ್, ಪ್ರೇಮನಾಥ್ ಕರ್ಕೆರಾ, ರಮೇಶ್ ಅನ್ನಪ್ಪಾಡಿ, ಬಾಲಕೃಷ್ಣ ಅಂಚನ್, ಗಣೇಶ್ ಪೂಂಜರಕೋಡಿ, ಪ್ರಶಾಂತ್ ಕೋಟ್ಯಾನ್, ಗಿರೀಶ್ ಪೆರ್ವ, ಹರೀಶ್ ಕೋಟ್ಯಾನ್ ಮತ್ತಿತರು ಉಪಸ್ಥಿತರಿದ್ದರು.
ಕ್ರೀಡೋತ್ಸವ ಸಮಿತಿ ಸಂಚಾಲಕ ಬೇಬಿ ಕುಂದರ್ ಸ್ವಾಗತಿಸಿದರು, ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ತುಂಬೆ ವಂದಿಸಿದರು, ಬಂಟ್ವಾಳ ಯುವ ವಾಹಿನಿಯ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.