ಬಂಟ್ವಾಳ: ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ದಿನವಿಡೀ ಸುರಿದ ಭಾರೀ ಮಳೆಗೆ ಇಲ್ಲಿನ ನೇತ್ರಾವತಿ ನದಿಯಲ್ಲಿ ನೆರೆ ನೀರು ರಭಸದಿಂದ ಹರಿಯುತ್ತಿದ್ದು, ನೀರಿನ ಮಟ್ಟ ಏರಿಕೆಯಾಗಿದೆ.
ಮಂಗಳವಾರ ಸಂಜೆ ನದಿ ನೀರಿನ ಮಟ್ಟ 7.5 ಮೀಟರ್ ಏರಿಕೆಯಾಗಿದ್ದು, ಗರಿಷ್ಟ ಮಟ್ಟ 8.5 ಮೀ.ತಲುಪಿದರೆ ತಗ್ಗು ಪ್ರದೇಶಗಳಿಗೆ ಮುಳುಗಡೆ ಭೀತಿ ಎದುರಾಗಲಿದೆ. ಇಲ್ಲಿನ ಹೊಸ ಸೇತುವೆ ನಿರ್ಮಾಣಕ್ಕೆ ಅಳವಡಿಸಿದ ಪಿಲ್ಲರ್ ನಡುವೆ ತಂದು ರಾಶಿ ಹಾಕಿದ್ದ ಮಣ್ಣು ನೆರೆಗೆ ಕೊಚ್ಚಿ ಹೋಗುತ್ತಿರುವ
ದೃಶ್ಯ ಕಂಡು ಬಂದಿದೆ. ಇನ್ನೊಂದೆಡೆ ತುಂಬೆ ಅಣೆಕಟ್ಟೆಯಲ್ಲಿ ಎಲ್ಲಾ ಗೇಟು ತೆರೆಯಲಾಗಿದ್ದು, 6 ಮೀಟರ್ ಎತ್ತರಕ್ಕೆ ನೆರೆ ನೀರು ರಭಸದಿಂದ ಹರಿಯುತ್ತಿದೆ. ಈ ನಡುವೆ ಕಲ್ಲಡ್ಕ-ಮಾಣಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ರಸ್ತೆಯಲ್ಲೇ ನೀರು ನಿಂತು ವಾಹನ ಸವಾರರು ಸಂಕಟ ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ.
















