ಬಿ.ಮೂಡ: ಸರಕಾರಿ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ ಹಾಗೂ ವಿಶ್ವ ಪರಿಸರ ದಿನಾಚರಣೆ.

Coastal Bulletin
ಬಿ.ಮೂಡ: ಸರಕಾರಿ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ ಹಾಗೂ ವಿಶ್ವ ಪರಿಸರ ದಿನಾಚರಣೆ.

ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಬಂಟ್ವಾಳ ಶ್ರೀ ಸತ್ಯಸಾಯಿ ಸಮಿತಿಯ ವತಿಯಿಂದ ನೋಟ್ ಬುಕ್ ವಿತರಣೆ ನಡೆಯಿತು. ಇದೇ ವೇಳೆ ಸರಕಾರದಿಂದ ಒದಗಿಸಲಾದ ಸಮವಸ್ತ್ರ ವಿತರಣೆಯೂ ನಡೆಯಿತು.


ಬಂಟ್ವಾಳದ ಸತ್ಯಸಾಯಿ ಸಮಿತಿಯ ಶಿಕ್ಷಣ ಸಂಯೋಜಕರಾಗಿರುವ ಭಾರತಿ ಕುಂದರ್ ಮಕ್ಕಳಿಗೆ ನೋಟ್ ಬುಕ್ ವಿತರಿಸಿ ಮಾತನಾಡಿ, ಒಳ್ಳೆಯ ಚಿಂತನೆ, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಎಳವೆಯಲ್ಲಿಯೇ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯವನ್ನು ಶ್ರೀ ಸತ್ಯಸಾಯಿ ಸಮಿತಿ ಮಾಡುತ್ತಿದ್ದು, ಅದರ ಅಂಗವಾಗಿ ಬಿ.ಮೂಡ ಸರಕಾರಿ ಪ್ರಾಥಮಿಕ ಶಾಲೆಯನ್ನು ಆಯ್ದುಕೊಂಡಿದೆ. ಪರಿಸರ ಸಂರಕ್ಷಣೆ ಸಹಿತ ಪ್ರತಿಯೊಂದು ವಿಚಾರದಲ್ಲೂ ಮಕ್ಕಳಿಗೆ ಸದ್ವಿಚಾರವನ್ನು ಬಿತ್ತರಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ ಎಂದರು.

ಮಂಗಳೂರಿನ ಗ್ಲೋಬಲ್ ಇಕೋ ಫೌಂಡೇಶನ್ ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ ಶ್ರೀನಿವಾಸ ನಾಯಕ್ ಇಂದಾಜೆ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಯುವ ಮಹಿಳಾ ವಿಭಾಗ ಸಂಯೋಜಕರಾದ ದೀಪಾ ಪ್ರವೀಣ್, ಹಿರಿಯ ವಿದ್ಯಾರ್ಥಿಗಳಾದ ಪತ್ರಕರ್ತರಾದ ಯಾದವ ಅಗ್ರಬೈಲು, ಸಂದೀಪ್ ಸಾಲ್ಯಾನ್, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಹರೀಶ್ ಮಾಂಬಾಡಿ, ಮುಖ್ಯ ಶಿಕ್ಷಕಿ ಲಕ್ಷ್ಮೀ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಶಶಿಧರ್ ಮತ್ತು ಸದಸ್ಯರಾದ ಕವಿತಾ, ಅನಿತಾ, ಜಯಂತಿ, ನಿಶ್ಮಿತಾ, ಸುನೀತಾ ಉಪಸ್ಥಿತರಿದ್ದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ವಿನೋದಾ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ.ಸಿ. ಸದಸ್ಯ ಶಿವಮೂರ್ತಿ ಆರ್. ವಂದಿಸಿದರು. ಶಿಕ್ಷಕಿ ಸುಶೀಲಾ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರಾದ ಐರಿನ್, ವಿಮಲಾ, ನಿಶ್ಮಿತಾ, ಪೂರ್ಣಿಮಾ, ಲಾವಣ್ಯ, ದಿವ್ಯಾ ಸಹಕರಿಸಿದರು.

*****

ಮಕ್ಕಳ ಹೆಸರಲ್ಲಿ ಸಸಿ ನೆಟ್ಟು ಪೋಷಿಸಿ: ಪಿಯೂಸ್ ಎಲ್. ರೋಡ್ರಿಗಸ್

ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಇದರ ಅಂಗವಾಗಿ ವಿದ್ಯಾರ್ಥಿಗಳಿಗೆ ಪರಿಸರ ಕುರಿತ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದ್ದು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಹಾಗೂ ಬುಡಾ ಮಾಜಿ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್ ಅವರು ಬಹುಮಾನ ವಿತರಿಸಿ ಮಾತನಾಡಿ, ವರ್ಷದ

365 ದಿನಗಳೂ ಪರಿಸರ ದಿನಗಳೇ ಆಗಿದೆ. ಮಕ್ಕಳ ಹೆಸರಲ್ಲಿ ಸಸಿ ನೆಟ್ಟು ಅವುಗಳನ್ನು ಪೋಷಿಸಿ ಎಂದು ಹೆತ್ತವರಿಗೆ ಕಿವಿಮಾತು ಹೇಳಿದರು. ಪಟಾಕಿ ಸಹಿತ ಮಾಲಿನ್ಯ ಉಂಟುಮಾಡುವುದನ್ನು ನಾವು ತ್ಯಜಿಸಬೇಕು, ಪ್ಲಾಸ್ಟಿಕ್ ಬಳಕೆಯ ಬದಲು ಪರ್ಯಾಯ ಮಾರ್ಗ ಅನುಸರಿಸಬೇಕು ಎಂದ ಅವರು, ನಮ್ಮ ದೇಹದ ಆರೋಗ್ಯ ಹೇಗೆ ಕಾಪಾಡುತ್ತೇವೋ ಹಾಗೆಯೇ ಭೂಮಿಯ ಆರೋಗ್ಯವನ್ನೂ ರಕ್ಷಿಸಬೇಕಾಗಿರುವುದು ಇಂದಿನ ಅನಿವಾರ್ಯ. ಸಾಧ್ಯವಾದಷ್ಟು ಸಾವಯವ ಉತ್ಪನ್ನ ಬಳಕೆ ಮಾಡಬೇಕು, ತ್ಯಾಜ್ಯ ಸಮರ್ಪಕ ವಿಲೇವಾರಿ ಕುರಿತು ಗಮನಹರಿಸಬೇಕು, ಮನೆಯ ಶೇ.30ರಷ್ಟಾದರೂ ಹಸಿರು ಇರಬೇಕು ಎಂದರು.

ಮಂಗಳೂರಿನ ಗ್ಲೋಬಲ್ ಇಕೋ ಫೌಂಡೇಶನ್ ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ ಶ್ರೀನಿವಾಸ ನಾಯಕ್ ಇಂದಾಜೆ ಮಕ್ಕಳಿಗೆ ಪರಿಸರಸ್ನೇಹಿ ಬಟ್ಟೆ ಕೈಚೀಲ ವಿತರಿಸಿ ಮಾತನಾಡಿ, ಮಕ್ಕಳಲ್ಲಿ ಪರಿಸರಪ್ರಜ್ಞೆಯನ್ನು ಬೆಳೆಸಲು ಕೈಚೀಲ ವಿತರಿಸಲಾಗುತ್ತಿದೆ. ಅಂಗಡಿಗೆ ಹೋಗಿ ತರಕಾರಿ ಮತ್ತಿತರ ಸಾಮಗ್ರಿಗಳನ್ನು ತರಲು ಹಾಗೂ ಪ್ಲಾಸ್ಟಿಕ್ ಮುಕ್ತ ವ್ಯವಸ್ಥೆಯನ್ನು ನಿರ್ಮಿಸಬೇಕಾಗಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಮಾತನಾಡಿ, ಇತ್ತೀಚೆಗೆ ದಕ್ಷಿಣ ಕನ್ನಡ ದಲ್ಲೂ ಅಧಿಕ ತಾಪಮಾನದಿಂದ ಮನೆಯಿಂದ ಹೊರಗೆ ಬರಲು ಆಗದಂಥ ಪರಿಸ್ಥಿತಿ ನಿರ್ಮಾಣವಾಗಲು ನಾವು ಕಾರಣರಾಗಿದ್ದೇವೆ. ಪರಿಸರ ಸಂರಕ್ಷಣೆಯ ಕುರಿತು ಗಂಭೀರವಾಗಿ ಯೋಚಿಸಬೇಕು ಎಂದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ವಿನೋದಾ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳದ ಸತ್ಯಸಾಯಿ ಸಮಿತಿಯ ಶಿಕ್ಷಣ ಸಂಯೋಜಕರಾಗಿರುವ ಭಾರತಿ ಕುಂದರ್, ಯುವ ಮಹಿಳಾ ವಿಭಾಗ ಸಂಯೋಜಕರಾದ ದೀಪಾ ಪ್ರವೀಣ್, ಮುಖ್ಯ ಶಿಕ್ಷಕಿ ಲಕ್ಷ್ಮೀ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಶಶಿಧರ್ ಉಪಸ್ಥಿತರಿದ್ದರು. ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಹರೀಶ ಮಾಂಬಾಡಿ ಸ್ವಾಗತಿಸಿದರು. ಎಸ್.ಡಿ.ಎಂ.ಸಿ. ಸದಸ್ಯ ಶಿವಮೂರ್ತಿ ಆರ್. ವಂದಿಸಿದರು. ಶಿಕ್ಷಕಿ ಸುಶೀಲಾ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರಾದ ಐರಿನ್, ವಿಮಲಾ, ನಿಶ್ಮಿತಾ, ಪೂರ್ಣಿಮಾ, ಲಾವಣ್ಯ, ದಿವ್ಯಾ ಸಹಕರಿಸಿದರು.

Leave a Comment