ಕುಂದಾಪುರ:ಯಾರೋ ಕಿಡಿಗೇಡಿಗಳು ಮಾಡಿದ ತಪ್ಪಿಗೆ ಸೌದಿ ಅರೇಬಿಯಾದ ಜೈಲಿನಲ್ಲಿದ್ದ ಕುಂದಾಪುರದ ಹರೀಶ್ ಬಂಗೇರ ಕೊನೆಗೂ ಬಿಡುಗಡೆಯಾಗಿ,ತವರಿಗೆ ಮರಳಿದ್ದಾರೆ.
ಕೋಟೇಶ್ವರದ ಬಿಜಾಡಿಯ ಹರೀಶ್ ಬಂಗೇರ (35) ಸೌದಿ ಅರೇಬಿಯಾ ಜೈಲಿನಿಂದ ಬಿಡುಗಡೆಯಾಗಿದ್ದು, ಇಂದು ತಾಯ್ತಾಡಿಗೆ ಆಗಮಿಸಿದ್ದಾರೆ. ಮಂಗಳವಾರ ಸೌದಿಯ ದಮ್ಮಾಮ್ ವಿಮಾನ ನಿಲ್ದಾಣದಿಂದ ಹೊರಟು,ಇಂದು ಬೆಳಗ್ಗೆ(ಬುಧವಾರ) ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಪತಿಯನ್ನು ಪತ್ನಿ ಸುಮನಾ,ಸಂಬಂಧಿಕರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಪ್ರಕರಣದ ಹಿನ್ನೆಲೆ
ನಾಲ್ಕು ವರ್ಷದ ಹೆಣ್ಣು ಮಗುವಿನ ತಂದೆ ಮೂರು ವರ್ಷ ಹಿಂದೆ ಸೌದಿಯ ಕಂಪನಿಯೊಂದರಲ್ಲಿ ಎಸಿ ಮೆಕಾನಿಕ್ ಆಗಿ ಹರೀಶ್ ಕೆಲಸಕ್ಕೆ ಸೇರಿದ್ದರು. 2019ರಲ್ಲಿ ಹರೀಶ್ ಚಿಕ್ಕದೊಂದು ಬಾಡಿಗೆ ಮನೆಯಲ್ಲಿ ವಾಸವಿದ್ದರು.ಮಂಗಳೂರು ಗೋಲಿಬಾರ್ ಬಗ್ಗೆ ಫೇಸ್ಬುಕ್ ಪೋಸ್ಟ್ ಶೇರ್ ಮಾಡಿದ್ದರು. ಇದಕ್ಕೆ ಅಲ್ಲಿನ ಯುವಕರಿಂದ
ಆಕ್ಷೇಪ ವ್ಯಕ್ತವಾಗಿ, ಹರೀಶ್ ಕ್ಷಮೆ ಯಾಚಿಸುವ ವಿಡಿಯೋ ಹಾಕಿದ್ದರು. ಅಲ್ಲದೆ, ಫೇಸ್ಬುಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರು.ಆದರೆ, ಮತ್ತೆ ಹರೀಶ್ ಬಂಗೇರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಮೆಕ್ಕಾ ಮತ್ತು ಸೇದಿ ದೊರೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಲಾಗಿತ್ತು. ಬಳಿಕ ಕಂಪನಿಯೂ ಅವರನ್ನು ಕೆಲಸದಿಂದ ವಜಾಗೊಳಿಸಿದ್ದು, ಅಲ್ಲಿನ ಪೊಲೀಸರು ಬಂಧಿಸಿದ್ದರು. ವಿವಾದ ಪೋಸ್ಟ್ ಮಾಡಿರುವುದು ನಕಲಿ ಖಾತೆಯಿಂದ ಎಂದು ಹರೀಶ್ ಪತ್ನಿ ಉಡುಪಿ ಠಾಣೆಗೆ ದೂರು ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಈಗಾಗಲೇ ಉಡುಪಿ ಪೊಲೀಸರು ಬಂಧಿಸಿದ್ದು, ಆರೋಪಿಗಳು ಈಗಾಗಲೇ ಜಾಮೀನು ಪಡೆದು ಬಿಡುಗಡೆಯಾಗಿದ್ಧಾರೆ.














