ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಮನ್ದೀಪ್ ರಾಯ್ ನಗರದಲ್ಲಿನ ಭೈರಸಂದ್ರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಇವರಿಗೆ ಹೃದಯಾಘಾತ ಸಂಭವಿಸಿ ಬೆಂಗಳೂರಿನ ಶೇಷಾದ್ರಿಪುರದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ರು. ಬಳಿಕ ಆಗಾಗ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ಇಂದು ನಿಧನ ಹೊಂದಿದ್ದಾರೆ. ಇಂದು 12 ಗಂಟೆ ಸುಮಾರಿಗೆ ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಪುತ್ರಿ ಅಕ್ಷತಾ ಮಾಹಿತಿ ನೀಡಿದ್ದಾರೆ.
500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಮನ್ದೀಪ್ ರಾಯ್ ತಮ್ಮ ಹಾಸ್ಯ ಪಾತ್ರಗಳ ಮೂಲಕ ಕನ್ನಡ ಸಿನಿ ಪ್ರೇಮಿಗಳನ್ನ ಸೆಳೆದಿದ್ದರು. ಕನ್ನಡದ ಹಿರಿಯ ನಟರಾದ ಅನಂತ್
ನಾಗ್, ಶಂಕರ್ ನಾಗ್, ಡಾ. ರಾಜ್ಕುಮಾರ್, ವಿಷ್ಣುವರ್ಧನ್, ರವಿಚಂದ್ರನ್ ಸೇರಿದಂತೆ ಇಂದಿನ ಯುವ ನಟರ ಜೊತೆಯೂ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದರು.
ಮಿಂಚಿನ ಓಟ, ಬಾಡದ ಹೂವು, ಆಕಸ್ಮಿಕ, ಅಗ್ನಿ ಐಪಿಎಸ್, ದೀಪಾವಳಿ, ಅಯ್ಯ, ಅಪೂರ್ವ ಸಂಗಮ, ಪ್ರೀತ್ಸೋದ್ ತಪ್ಪಾ, ಆಂಟಿ ಪ್ರೀತ್ಸೆ, ಏಳು ಸುತ್ತಿನ ಕೋಟೆ, ಸಂಕಷ್ಟಕರ ಗಣಪತಿ, ಗಜಪತಿ ಗರ್ವಭಂಗ, ಆಸೆಗೊಬ್ಬ ಮೀಸೆಗೊಬ್ಬ, ಓ ಪ್ರೇಮವೆ, ಬೆಂಕಿಯ ಬಲೆ, ಆಪ್ತರಕ್ಷಕ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಮನ್ದೀಪ್ ರಾಯ್ ಅಭಿನಯಿಸಿದ್ದರು.














