ಬೆಂಗಳೂರು: ಮೈಸೂರು ದಸರಾ ಉದ್ಘಾಟನೆ ಬಳಿಕ ಹುಬ್ಬಳ್ಳಿಗೆ ತೆರಳಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ನಿನ್ನೆ ಸಂಜೆ ಬೆಂಗಳೂರಿಗೆ ಆಗಮಿಸಿದ್ದರು. ಇಂದು ಬೆಂಗಳೂರಿನಲ್ಲಿ ಅವರು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಂದು ಬೆಳಗ್ಗೆ ಬೆಂಗಳೂರಿನ ಹೆಚ್ಎಎಲ್ ಆವರಣದಲ್ಲಿ ಕ್ರಯೋಜನಿಕ್ ಇಂಜಿನ್ ಉತ್ಪಾದನಾ ಸೌಲಭ್ಯ ವಿಭಾಗವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟನೆ ಮಾಡಿದ್ದಾರೆ. ವರ್ಚುವಲ್ ಮೂಲಕ ದ್ರೌಪದಿ ಮುರ್ಮು ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಈ 208 ಕೋಟಿ ರೂ. ಮೌಲ್ಯದ ರಾಕೆಟ್ ಇಂಜಿನ್ ಉತ್ಪಾದನಾ ಸೌಲಭ್ಯವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಿದ್ದಾರೆ. 208 ಕೋಟಿ ರೂ. ಮೊತ್ತದ ಇಂಟಿಗ್ರೇಟೆಡ್ ಕ್ರಯೋಜೆನಿಕ್ ಇಂಜಿನ್ ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟಿ (ICMF) ಅನ್ನು ಬೆಂಗಳೂರಿನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಿರ್ಮಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಗೆ ಇದು ಸಂಪೂರ್ಣ ರಾಕೆಟ್ ಎಂಜಿನ್ ತಯಾರಿಕೆ ನಡೆಸಲಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ಭಾರತಿ ಪ್ರವೀಣ್ ಪವಾರ್, ಸಚಿವ ಡಾ. ಸುಧಾಕರ್, ಹೆಚ್ಎಎಲ್ ಸಿಎಂಡಿ ಅನಂತಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದಕ್ಷಿಣ ವಲಯ ವೈರಾಣು ಸಂಸ್ಥೆಗೆ ವರ್ಚುಯಲ್ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇಂದು ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಸಮಾರಂಭ ಹಾಗೂ ಕರ್ನಾಟಕ
ಸರ್ಕಾರದಿಂದ ಆಯೋಜಿಸಿರುವ ನಾಗರಿಕ ಸನ್ಮಾನ ಸಮಾರಂಭದಲ್ಲಿ ದ್ರೌಪದಿ ಮುರ್ಮು ಭಾಗವಹಿಸಲಿದ್ದಾರೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.
ಸೆಪ್ಟೆಂಬರ್ 28ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕರ್ನಾಟಕ ಪ್ರವಾಸ ಮುಗಿಸಿ ನವದೆಹಲಿಗೆ ವಾಪಸ್ಸಾಗಲಿದ್ದಾರೆ. ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು 4,500 ಚದರ ಮೀಟರ್ ಜಾಗದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ICMF ಅನ್ನು ಉದ್ಘಾಟಿಸಲಿದ್ದಾರೆ. ಎಚ್ಎಎಲ್ನ ಏರೋಸ್ಪೇಸ್ ವಿಭಾಗದಲ್ಲಿ ಕ್ರಯೋಜೆನಿಕ್ ಎಂಜಿನ್ ಮಾಡ್ಯೂಲ್ಗಳನ್ನು ಉತ್ಪಾದಿಸುವ ಸೌಲಭ್ಯವನ್ನು ಸ್ಥಾಪಿಸಲು 2013ರಲ್ಲಿ ಇಸ್ರೋದೊಂದಿಗೆ ಎಂಒಯುಗೆ ಸಹಿ ಹಾಕಲಾಯಿತು. ನಂತರ 208 ಕೋಟಿ ರೂ. ಹೂಡಿಕೆಯೊಂದಿಗೆ ICMF ಸ್ಥಾಪನೆಗೆ ಅವಕಾಶ ಕಲ್ಪಿಸಲು 2016ರಲ್ಲಿ ಒಪ್ಪಂದವನ್ನು ನವೀಕರಿಸಲಾಯಿತು.
ಕ್ರಯೋಜೆನಿಕ್ ಇಂಜಿನ್ಗಳು ವಿಶ್ವಾದ್ಯಂತ ಉಡಾವಣಾ ವಾಹನಗಳಲ್ಲಿ ಹೆಚ್ಚಾಗಿ ಬಳಸುವ ಎಂಜಿನ್ಗಳಾಗಿವೆ. ಫ್ರಾನ್ಸ್, ಚೀನಾ, ಜಪಾನ್, ರಷ್ಯಾ ಮತ್ತು ಅಮೆರಿಕಾ ಈ ಕೆಲವೇ ರಾಷ್ಟ್ರಗಳು ಕ್ರಯೋಜೆನಿಕ್ ಎಂಜಿನ್ನ ಸಂಕೀರ್ಣತೆಯಿಂದಾಗಿ ಇಲ್ಲಿಯವರೆಗೆ ಕ್ರಯೋಜೆನಿಕ್ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿವೆ. 2014ರಲ್ಲಿ GSLV-D5 ಅನ್ನು ಕ್ರಯೋಜೆನಿಕ್ ಎಂಜಿನ್ ಬಳಸಿ ಯಶಸ್ವಿಯಾಗಿ ಹಾರಿಸುವ ಮೂಲಕ ಭಾರತವು ಕ್ರಯೋಜೆನಿಕ್ ಎಂಜಿನ್ಗಳನ್ನು ಅಭಿವೃದ್ಧಿಪಡಿಸಿದ 6ನೇ ರಾಷ್ಟ್ರವೆಂಬ ಖ್ಯಾತಿಗೆ ಪಾತ್ರವಾಯಿತು.














