ಮೈಸೂರು :ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ದಿನಕ್ಕೆ ೧೦೦ ಕೋಟಿ ರೂ. ಲೂಟಿ ಹೊಡೆಯುತ್ತಿದ್ದಾರೆ. ವಿರೋಧ ಪಕ್ಷಗಳಿಗೂ ಈ ಭ್ರಷ್ಟಾಚಾರದಲ್ಲಿ ಪಾಲಿದೆ. ಹಾಗಾಗಿ ಅವರ್ಯಾರೂ ಯಡಿಯೂರಪ್ಪನವರ ವಿರುದ್ಧ ಮಾತನಾಡುತ್ತಿಲ್ಲ. ಎಲ್ಲರಿಗೂ ಯಡಿಯೂರಪ್ಪ ಮುಂದುವರಿಕೆ ಬೇಕಿದೆ ಎಂದು ಬಿಜೆಪಿ ಶಾಸಕ ಯತ್ನಾಳ್ ಟೀಕಾ ಪ್ರಹಾರ ನಡೆಸಿದ್ದಾರೆ.
ಮೈಸೂರಿನ ನಾಡದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದ ನಂತರ ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯ ಹಿಂಭಾಗದಲ್ಲಿರುವ ಗೆಸ್ಟ್ ಹೌಸ್ ನಲ್ಲಿ ವಿಜಯೇಂದ್ರ ಅವರ ಡೀಲ್ ಕೇಂದ್ರವಾಗಿದೆ. ಎಲ್ಲಾ ಡೀಲ್ಗಳು ಅಲ್ಲೇ ನಡೆಯುವುದು. ಸಿಸಿಬಿ ಪೊಲೀಸರು ಅಲ್ಲಿ ಮಾತ್ರ ದಾಳಿ ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದರು.
ಭ್ರಷ್ಟಾಚಾರದಲ್ಲಿ ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರನ ಜೊತೆ ಪಾಲುದಾರರಾಗಿದ್ದಾರೆ. ಅವರಿಗೂ ಭ್ರಷ್ಟಾಚಾರ ದುಡ್ಡು ಹೋಗುತ್ತಿದೆ ಎಂದು ಆರೋಪಿಸಿದರು.
ದುಷ್ಟರ ಸಂಹಾರ ಆದಷ್ಟು ಬೇಗ ಆಗಬೇಕು. ದುಷ್ಟರ ಸಂಹಾರ ಮಾಡುವಂತೆ ತಾಯಿ ಚಾಮುಂಡೇಶ್ವರಿ
ಬಳಿ ಬೇಡಿಕೊಂಡಿದ್ದೇನೆ. ರಾಜ್ಯವನ್ನು ಲೂಟಿ ಹೊಡೆಯುತ್ತಿರುವ ದುಷ್ಟರ ಸಂಹಾರ ಶೀಘ್ರ ಆಗುವ ವಿಶ್ವಾಸವೂ ಇದೆ ಎಂದು ಹರಿಹಾಯ್ದಿದ್ದಾರೆ
ಆಗಸ್ಟ್ ೧೫ ಸ್ವಾತಂತ್ರ್ಯ ದಿನದ ಹೊತ್ತಿಗೆ ನೂತನ ಮುಖ್ಯಮಂತ್ರಿ ರಾಜ್ಯದಲ್ಲಿ ಧ್ವಜಾರೋಹಣ ನಡೆಸಲಿದ್ದಾರೆ ಎಂಬ ಚರ್ಚೆಗಳ ಬಗ್ಗೆಯೂ ಮಾತನಾಡಿದ ಯತ್ನಾಳ್, ಅಲ್ಲಿಯವರೆಗೂ ಏಕೆ ಕಾಯಬೇಕು. ಆದಷ್ಟು ಬೇಗ ಯಡಿಯೂರಪ್ಪ ಬದಲಾಗಬೇಕು ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಳಂಬವಾಗುತ್ತಿದೆ. ಕುರುಕ್ಷೇತ್ರ ಯುದ್ಧದಲ್ಲಿ ಕೌರವರೊಂದಿಗೆ ಭೀಷ್ಮಚಾರ್ಯರು ದ್ರೋಣಚಾರ್ಯರಂತಹ ಒಳ್ಳೆಯವರು ಇದ್ದರು. ಆದರೂ ದುಷ್ಠಸಂಹಾರ ಆಗಲೇ ಬೇಕು. ಕೆಟ್ಟವರಿಗೆ ಕೊನೆಗಾಲ ಇದ್ದೇ ಇರುತ್ತದೆ. ಹೈಕಮಾಂಡ್ ಕೂಡ ಮುಖ್ಯಮಂತ್ರಿ ಬದಲಾವಣೆಗೆ ಪರಿಶೀಲನೆ ನಡೆಸಿದೆ ಎಂದರು















