ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ; ಒಂದೇ ಕುಟುಂಬದ 7 ಮಂದಿ ಸೇರಿ 11 ಜನ ದುರ್ಮರಣ

Coastal Bulletin
ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ; ಒಂದೇ ಕುಟುಂಬದ 7 ಮಂದಿ ಸೇರಿ 11 ಜನ ದುರ್ಮರಣ

ಶ್ರೀನಗರ: ರಾಂಬನ್ ಮತ್ತು ರಿಯಾಸಿ ಜಿಲ್ಲೆಗಳ ರಾಜ್‌ಗಢ ಮತ್ತು ಮಹೋರ್ ಪ್ರದೇಶಗಳಲ್ಲಿ ಶನಿವಾರ ಮಧ್ಯರಾತ್ರಿ ಎರಡು ಬಾರಿ ಮೇಘಸ್ಫೋಟ ಸಂಭವಿಸಿದ್ದು, ಒಂದೇ ಕುಟುಂಬದ ಏಳು ಸದಸ್ಯರು ಸೇರಿದಂತೆ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ. ಒಬ್ಬರು ಕಾಣೆಯಾಗಿದ್ದಾರೆ. ಶನಿವಾರ ಮಧ್ಯರಾತ್ರಿ 12:30 ರ ಸುಮಾರಿಗೆ ರಾಜ್‌ಗಢದಲ್ಲಿ ಮೇಘಸ್ಫೋಟ ಸಂಭವಿಸಿದೆ. ಎರಡು ಮನೆಗಳು ಮತ್ತು ಒಂದು ಶಾಲಾ ಕಟ್ಟಡಕ್ಕೆ ಹಾನಿಯಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದ ರಿಯಾಸಿಯ ಮಹೋರ್ ಪ್ರದೇಶದ ಬದ್ದರ್ ಗ್ರಾಮದಲ್ಲಿ ಭಾರಿ ಭೂಕುಸಿತ ಸಂಭವಿಸಿ ಒಂದೇ ಕುಟುಂಬದ ಏಳು ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ ಮೇಘಸ್ಫೋಟದಿಂದಾಗಿ ಅವರು ಮಣ್ಣಿನ ಮನೆ ಅವಶೇಷಗಳ ಅಡಿಯಲ್ಲಿ ಹೂತು ಮೃತಪಟ್ಟಿದ್ದಾರೆ. ಸ್ಥಳೀಯ ಗ್ರಾಮಸ್ಥರು ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಏಳು ಶವಗಳನ್ನು ಹೊರತೆಗೆದರು. ಮೃತರನ್ನು ನಜೀರ್ ಅಹ್ಮದ್, ವಜೀರಾ ಬೇಗಂ, ಬಿಲಾಲ್ ಅಹ್ಮದ್, ಮೊಹಮ್ಮದ್ ಮುಸ್ತಫಾ, ಮೊಹಮ್ಮದ್ ಆದಿಲ್, ಮೊಹಮ್ಮದ್ ಮುಬಾರಕ್ ಮತ್ತು ಮೊಹಮ್ಮದ್ ವಾಸಿಂ ಎಂದು ಗುರುತಿಸಲಾಗಿದೆ.

ಮತ್ತೊಂದು ಘಟನೆಯಲ್ಲಿ ರಂಬನ್ ಜಿಲ್ಲೆಯ ರಾಜ್‌ಗಡ್ ಪ್ರದೇಶದಲ್ಲಿ ಮೇಘಸ್ಫೋಟದಿಂದಾಗಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಕಾಣೆಯಾಗಿದ್ದಾರೆ. ಇಂದು 12:30

ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಪ್ರಸ್ತುತ ಪ್ರದೇಶದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಘಟನೆಯಲ್ಲಿ ಸಾವನ್ನಪ್ಪಿದ ಮೂವರ ಶವಗಳನ್ನು ರಕ್ಷಣಾ ಕಾರ್ಯಕರ್ತರು ಹೊರತೆಗೆದಿದ್ದಾರೆ.

ಉತ್ತರಾಖಂಡದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಚಮೋಲಿ ಜಿಲ್ಲೆಯಲ್ಲಿ ರಾತ್ರಿಯಿಡೀ ಭಾರೀ ಮಳೆಯಾಗಿದೆ. ಐದು ಸ್ಥಳಗಳಲ್ಲಿ ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಜೋಶಿಮಠ ಮತ್ತು ಅನಿಮಮಠ ಬಳಿ ಸಂಭವಿಸಿದ ಬೃಹತ್ ಪರ್ವತ ಕುಸಿತವು ರಸ್ತೆಗೆ ಅವಶೇಷಗಳನ್ನು ತಂದು ಹಾಕಿದೆ. ಯಾತ್ರಾರ್ಥಿಗಳು ಮತ್ತು ಸ್ಥಳೀಯರ ಸಂಚಾರವನ್ನು ಸ್ಥಳಿಯ ಆಡಳಿತ ಕಡಿತಗೊಳಿಸಿತು. ರಾಜ್ಯಾದ್ಯಂತ ಮೇಘಸ್ಫೋಟ ಮತ್ತು ಭೂಕುಸಿತಗಳು ವ್ಯಾಪಕ ವಿನಾಶಕ್ಕೆ ಕಾರಣವಾಗಿ ರಾಜ್ಯದ್ಯಾಂರ ಆರು ಜನರು ಸಾವನ್ನಪ್ಪಿದರು. 11 ಜನರು ನಾಪತ್ತೆಯಾಗಿದ್ದಾರೆ.

Leave a Comment