ಈ ಬಾರಿ ಮಾತುಕತೆಯ ಬದಲು ಪ್ರತೀಕಾರ; ಪಾಕಿಸ್ತಾನದ ವಿರುದ್ಧ ಫಾರೂಕ್ ಅಬ್ದುಲ್ಲಾ ಕಟು ಸಂದೇಶ

Coastal Bulletin
ಈ ಬಾರಿ ಮಾತುಕತೆಯ ಬದಲು ಪ್ರತೀಕಾರ; ಪಾಕಿಸ್ತಾನದ ವಿರುದ್ಧ ಫಾರೂಕ್ ಅಬ್ದುಲ್ಲಾ ಕಟು ಸಂದೇಶ

ಶ್ರೀನಗರ: ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ (Farooq Abdullah) ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ನೀಡಿದ್ದಾರೆ. ದೇಶದ ಹಳೆಯ ‘ಎರಡು ರಾಷ್ಟ್ರ’ ಸಿದ್ಧಾಂತವನ್ನು ಕಾಶ್ಮೀರವು 1947ರಲ್ಲೇ ತಿರಸ್ಕರಿಸಿತು. “ನಮ್ಮ ನೆರೆಹೊರೆಯವರು ಇಂದಿಗೂ ಸಹ ಮಾನವೀಯತೆಯನ್ನು ಕೊಲೆ ಮಾಡಿದ್ದಾರೆಂದು ಅರ್ಥಮಾಡಿಕೊಳ್ಳದಿರುವುದು ನಮಗೆ ವಿಷಾದ ತಂದಿದೆ. ಹೀಗೆ ಮಾಡುವುದರಿಂದ ನಾವು ಪಾಕಿಸ್ತಾನದ ಜೊತೆ ಸೇರುತ್ತೇವೆ ಎಂದು ಅವರು ಭಾವಿಸಿದರೆ, ನಾವು ಅವರ ತಪ್ಪು ತಿಳುವಳಿಕೆಯನ್ನು ಅವರಿಗೆ ಅರ್ಥ ಮಾಡಿಸಬೇಕಾಗಿದೆ. 1947ರಲ್ಲಿ ನಾವು ಅವರೊಂದಿಗೆ ಹೋಗಲಿಲ್ಲ ಅಂದಮೇಲೆ ಇಂದು ಏಕೆ ಹೋಗುತ್ತೇವೆ? ಆ ಸಮಯದಲ್ಲಿ ನಾವು ಎರಡು ರಾಷ್ಟ್ರ ಸಿದ್ಧಾಂತವನ್ನು ನೀರಿಗೆ ಎಸೆದಿದ್ದೇವೆ. ಇಂದು ಕೂಡ ನಾವು ಎರಡು ರಾಷ್ಟ್ರ ಸಿದ್ಧಾಂತವನ್ನು ಸ್ವೀಕರಿಸಲು ಸಿದ್ಧರಿಲ್ಲ. ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್, ನಾವೆಲ್ಲರೂ ಒಂದೇ” ಎಂದು ಫಾರೂಕ್ ಅಬ್ದುಲ್ಲಾ ಇಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

"ನಾನು ಪ್ರತಿ ಬಾರಿಯೂ ಪಾಕಿಸ್ತಾನದೊಂದಿಗೆ ಮಾತುಕತೆಗೆ ಒಲವು ತೋರುತ್ತಿದ್ದೆ. ಆದರೆ, ಈ ಬಾರಿ ಪಹಲ್ಗಾಮ್ ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನಾವು ಹೇಗೆ ಉತ್ತರಿಸುವುದು? ನಾವು ಅವರಿಗೆ ನ್ಯಾಯ ನೀಡಬೇಕಿದೆ. ಇಂದು ಭಾರತ ದೇಶವು ಇಂತಹ ದಾಳಿಗಳು ಮತ್ತೆಂದೂ ಸಂಭವಿಸದಂತೆ ಕ್ರಮ ಕೈಗೊಳ್ಳಬೇಕೆಂದು ಬಯಸುತ್ತಿದೆ” ಎಂದು ಫಾರೂಲ್ ಅಬ್ದುಲ್ಲಾ ಹೇಳಿರುವುದಾಗಿ ANI ವರದಿ ಮಾಡಿದೆ.

ಪಹಲ್ಗಾಮ್ ದಾಳಿಯನ್ನು ಉದ್ದೇಶಿಸಿ ಮಾತನಾಡಲು ಫಾರೂಕ್ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಭಾಗವಹಿಸಿದ್ದರು. ಏಪ್ರಿಲ್ 22ರಂದು ಜಮ್ಮು

ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಕ್ಕೆ ಏನು “ಉತ್ತರ” ನೀಡಬೇಕೆಂಬುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನೇ ಪ್ರಶ್ನಿಸಬೇಕು ಎಂದು ಅವರು ಹೇಳಿದರು.

ಪಹಲ್ಗಾಮ್‌ನಲ್ಲಿ ನಡೆದ ದಾಳಿಯು 2019ರ ಪುಲ್ವಾಮಾ ದಾಳಿಯ ನಂತರ ಕಾಶ್ಮೀರ ಕಣಿವೆಯಲ್ಲಿ ನಡೆದ ಅತ್ಯಂತ ಮಾರಕ ದಾಳಿಗಳಲ್ಲಿ ಒಂದಾಗಿದೆ. ಪುಲ್ವಾಮಾ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಸಾವನ್ನಪ್ಪಿದ್ದರು. ಪಹಲ್ಗಾಮ್ ದಾಳಿಯಲ್ಲಿ 26 ಜನ ಮೃತಪಟ್ಟಿದ್ದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸಿದ್ದಕ್ಕಾಗಿ ಪಾಕಿಸ್ತಾನದ ವಿರುದ್ಧ ಭಾರತ ಬಲವಾದ ಕ್ರಮಗಳನ್ನು ತೆಗೆದುಕೊಂಡಿದೆ.

Leave a Comment