ಕಾರವಾರ: ಶಿರೂರು ಗುಡ್ಡ ಕುಸಿದ ಮೇಲೆ ನಡೆಯುತ್ತಿದ್ದ ನಿರಂತರ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಕೊಚ್ಚಿಕೊಂಡು ಹೋದ ಲಾರಿ ಹಾಗೂ ಲಾರಿ ಚಾಲಕ ಅರ್ಜುನ್ಗಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು. ಕೊನೆಗೂ ಲಾರಿ ಚಾಲಕ ಅರ್ಜುನ್ ಅವರ ಶವ ಪತ್ತೆಯಾಗಿದೆ.
ಕಳೆದ ಜುಲೈ 16ರ ಬೆಳಗ್ಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಈ ದುರಂತ ಘಟನೆ ನಡೆದಿತ್ತು. 10ಕ್ಕೂ ಹೆಚ್ಚು ಮಂದಿ ಶವ ಪತ್ತೆ ಮಾಡಿದ ರಕ್ಷಣಾ ಕಾರ್ಯಾಚರಣೆಗೆ ಕೇರಳ ಮೂಲದ ಲಾರಿ ಚಾಲಕನ ಸುಳಿವೇ ಸಿಕ್ಕಿರಲಿಲ್ಲ.
ಕಳೆದ ಆರು ದಿನಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆಯಲ್ಲಿ ಬಾರ್ಜ್ ಮೂಲಕ ನದಿಯಲ್ಲಿ ಲಾರಿ ಹಾಗೂ ನಾಪತ್ತೆಯಾದ ಮೂವರಿಗಾಗಿ ಹುಡುಕಾಟ ನಡೆಸಲಾಗಿತ್ತು. ನದಿಯ ಕಾರ್ಯಾಚರಣೆ ವೇಳೆ ಅರ್ಜುನ್ ಹಾಗೂ ಲಾರಿಯನ್ನು ಪತ್ತೆ ಮಾಡಲಾಗಿದೆ. ಗುಡ್ಡ ಕುಸಿತದಲ್ಲಿ ಸಿಕ್ಕು ಸಂಪೂರ್ಣ ನುಜ್ಜುಗುಜ್ಜಾಗಿರುವ ಈ ಲಾರಿ ಗುಡ್ಡಕುಸಿತದ ಭೀಕರತೆಗೆ ಸಾಕ್ಷಿಯಾಗಿದೆ.
ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಅರ್ಜುನ್ ಮತ್ತು ಲಾರಿ ನದಿಯ ಆಳದಲ್ಲಿ ಸಿಲುಕಿಕೊಂಡಿತ್ತು. ಸುಮಾರು 20 ಅಡಿ ಅಳದಲ್ಲಿ ಲಾರಿ ಇದೆ ಎಂಬ ಮಾಹಿತಿ ಕರಾವಳಿಯ ಮುಳುಗು ತಜ್ಞ ಈಶ್ವರ್ ಮಲ್ಪೆ ಮತ್ತು ಅವರ ತಂಡಕ್ಕೆ ಸಿಕ್ಕಿತ್ತು.
ಜಿಲ್ಲಾಡಳಿತದ ಮನವಿ
ಮೇರೆಗೆ ಶಿರೂರಿಗೆ ಆಗಮಿಸಿದ್ದ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ತಂಡ ಕಾರ್ಯಾಚರಣೆ ನಡೆಸಿತ್ತು. ನೀರಿನಲ್ಲಿರುವ ಲಾರಿ ಮತ್ತು ಚಾಲಕ ಅರ್ಜುನ್ನನ್ನು ಪತ್ತೆ ಹಚ್ಚಲು ನಿರಂತರ ಪ್ರಯತ್ನ ಪಟ್ಟಿತ್ತು. ಆ್ಯಂಬುಲೆನ್ಸ್ ಚಾಲಕನಾಗಿರುವ ಈಶ್ವರ್ ಅದೆಷ್ಟೋ ಜನರ ಜೀವ ಉಳಿಸಿದ್ದಾರೆ. ಮಾತ್ರವಲ್ಲದೆ ನದಿ ಆಳದಲ್ಲಿ ಸಿಲುಕಿದ, ನಾಪತ್ತೆಯಾದ ಮೃತದೇಹವನ್ನು ಪತ್ತೆ ಹಚ್ಚುವ ಸಾಹಸಿ ಇವರು. ಯಾರಿಂದಲೂ ಸಾಧ್ಯವಾಗದ ಕೆಲಸವನ್ನು ಈಶ್ವರ್ ಮಲ್ಪೆ ಮಾಡುತ್ತಾರೆ. ಎಂತಹದೇ ಅಪಾಯಕಾರಿಯಾದರು ಆ ಸ್ಥಳದಲ್ಲಿ ಶೋಧ ನಡೆಸಿ, ಅದೆಷ್ಟೋ ಮೃತದೇಹವನ್ನು ಮೇಲೆತ್ತಿಕೊಟ್ಟಿದ್ದಾರೆ.
ಕೇರಳದ ಕೋಯಿಕ್ಕೋಡ್ ಕಂಡ್ಯಕ್ಕಲ್ ಮೂಲದ ಅರ್ಜುನ್ (30) ಲಾರಿ ಮೂಲಕ ಟಿಂಬರ್ ಸಾಗಿಸುತ್ತಿದ್ದರು. ಲಾರಿ ಚಲಾಯಿಸುವ ವೇಳೆ ಶಿರೂರು ಬಳಿ ಲಾರಿ ನಿಲ್ಲಿಸಿದ್ದಾರೆ. ಆದರೆ ಮಳೆಗೆ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡೆ ಕುಸಿದಿದೆ ಪರಿಣಾಮ ಲಾರಿ ಜೊತೆಗೆ ಅರ್ಜುನ್ ನಾಪತ್ತೆಯಾಗಿದ್ದರು.















