ನವದೆಹಲಿ/ಬೆಂಗಳೂರು: ದೇಶಾದ್ಯಂತ ವಿಧ್ವಂಸಕ ಕೃತ್ಯಕ್ಕೆ ಉಗ್ರರು ಸಂಚು ರೂಪಿಸಿದ್ದ ಹೊತ್ತಲ್ಲೇ ರಾಷ್ಟ್ರರಾಜಧಾನಿಯ ಹೃದಯಭಾಗ ಕೆಂಪು ಕೋಟೆ ಬಳಿ ಭೀಕರ ಸ್ಫೋಟ (Delhi Blast) ಸಂಭವಿಸಿದೆ. ಫರಿದಾಬಾದ್ನಲ್ಲಿಂದು ಉಗ್ರರು ಅಡಗಿಸಿಟ್ಟಿದ್ದ 2,900 ಕೆಜಿ ಸ್ಫೋಟಕ ಪತ್ತೆಹಚ್ಚಿದ ಕೆಲವೇ ಗಂಟೆಗಳಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಜನರನ್ನು ಆತಂಕಕ್ಕೆ ದೂಡಿದೆ.
ಬೆಂಗಳೂರಿನಲ್ಲೂ ಹೈ ಅಲರ್ಟ್
ದೆಹಲಿಯಲ್ಲಿ ಸ್ಫೋಟ ಸಂಭವಿಸಿದ ಬೆನ್ನಲ್ಲೇ ವಾಣಿಜ್ಯ ನಗರಿ ಮುಂಬೈ, ಉತ್ತರ ಪ್ರದೇಶ (Uttar Pradesh) ಹಾಗೂ ಕರ್ನಾಟಕದ ಬೆಂಗಳೂರಿನಲ್ಲೂ (Bengaluru) ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಪೊಲೀಸರು ಕಟ್ಟೆಚ್ಚರ ವಹಿಸುವಂತೆ ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ಕೂಡಲೇ ಠಾಣಾ ವ್ಯಾಪ್ತಿಯಲ್ಲಿ ಗಸ್ತು ತಿರುಗುವಂತೆ ಎಚ್ಚರಿಸಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದ ಅಧೀನ ಕಚೇರಿಗಳಿಗೆ ಭದ್ರತೆ ಒದಗಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳು ಮತ್ತು ಲಾಡ್ಜ್ನಲ್ಲಿ ತಂಗಿರೋ ಹೊರ ರಾಜ್ಯದವರ ಮೇಲೆ ನಿಗಾ ವಹಿಸುವಂತೆ ಹಾಗೂ ರಾತ್ರಿ ಗಸ್ತು ಹೆಚ್ಚಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
ಯುಪಿನಲ್ಲಿ ಕಟ್ಟೆಚ್ಚರ
ಉತ್ತರ ಪ್ರದೇಶದಲ್ಲೂ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿ ಅಮಿತಾಭ್ ಯಶ್ ಸೂಚಿಸಿದ್ದಾರೆ. ಸೂಕ್ಷ್ಮ ಧಾರ್ಮಿಕ ಸ್ಥಳಗಳು, ಸೂಕ್ಷ್ಮ ಜಿಲ್ಲೆಗಳು ಮತ್ತು ಗಡಿ ಪ್ರದೇಶಗಳಲ್ಲಿ ಕೂಡಲೇ ಭದ್ರತೆ ಹೆಚ್ಚಿಸಲು ಉತ್ತರ ಪ್ರದೇಶದ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಸೂಚನೆ
ನೀಡಿದ್ದಾರೆ. ಅಲ್ಲದೇ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ನಡೆಸುವಂತೆ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಮುಂಬೈನಲ್ಲೂ ಪೊಲೀಶರು ಕಟ್ಟೆಚ್ಚರ ವಹಿಸಿದ್ದಾರೆ.
20ಕ್ಕೂ ಹೆಚ್ಚು ಮಂದಿಗೆ ಗಾಯ
ಸೋಮವಾರ ಸಂಜೆ 6:45 ರಿಂದ 7 ಗಂಟೆ ಅವಧಿಯಲ್ಲಿ ಸ್ಫೋಟ ಸಂಭವಿಸಿದ್ದು, ಈವರೆಗೆ 8 ಮಂದಿ ಸಾವನ್ನಪ್ಪಿದ್ದಾರೆ. 10ಕ್ಕೂ ಹೆಚ್ಚು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 6 ಕಾರ್ಗಳು, 4 ಆಟೋ ಛಿದ್ರಛಿದ್ರವಾಗಿವೆ. ಕೆಂಪುಕೋಟೆ ಮೆಟ್ರೋದ ಗೇಟ್ ನಂ.1ರ ಪಾರ್ಕಿಂಗ್ನಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ. ಆಕಸ್ಮಿಕ ಭೀಕರ ಸ್ಫೋಟದ ಸದ್ದು- ಬೆಂಕಿಗೆ ಜನ ನಡುಗಿಹೋಗಿದ್ದಾರೆ. 20ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿವೆ. ಇದು ಬಾಂಬ್ ಸ್ಫೋಟವಾ..? ಅಥವಾ ಸಿಎನ್ಜಿ ಸ್ಫೋಟವಾ..? ಏನು ಅನ್ನೋದು ನಿಖರವಾಗಿ ಗೊತ್ತಾಗ್ತಿಲ್ಲ. ದೆಹಲಿ ಪೊಲೀಸರು, ಸಿಆರ್ಪಿಎಫ್ ತಂಡ ಘಟನಾ ಸ್ಥಳದಲ್ಲಿ ಇದ್ದು, ಇಂಚಿಂಚೂ ಶೋಧ ನಡೆಸುತ್ತಿದ್ದಾರೆ. ಸ್ಫೋಟದ ವಸ್ತುಗಳನ್ನ ಸಂಗ್ರಹಿಸ್ತಿದ್ದಾರೆ. ಈ ಮಧ್ಯೆ, ಚೆನ್ನೈ, ಹೈದರಾಬಾದ್, ಮುಂಬೈ, ಅಹಮದಾಬಾದ್, ಕೋಲ್ಕತ್ತಾ ಸೇರಿದಂತೆ ಇಡೀ ದೇಶಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ.















