ಬುಧವಾರ ರಾತ್ರಿ ತಿರುಪತಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮಹಿಳೆಯರು ಸೇರಿದಂತೆ ಏಳು ಭಕ್ತರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ತಿರುಮಲ ಬೆಟ್ಟದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನಕ್ಕೆ ಟಿಕೆಟ್ಗಾಗಿ ಭಕ್ತರು ನಿಂತಿದ್ದಾಗ ಈ ಘಟನೆ ಸಂಭವಿಸಿದೆ. ಇದಕ್ಕೆ ದೇಶದ ಪ್ರಮುಖ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಜನವರಿ 10 ರಿಂದ ಪ್ರಾರಂಭವಾಗುವ 10 ದಿನಗಳ ವೈಕುಂಠ ದ್ವಾರ ದರ್ಶನಕ್ಕಾಗಿ ದೇಶಾದ್ಯಂತ ಸಾವಿರಾರು ಭಕ್ತರು ಆಗಮಿಸಿದ್ದರು. ಇದಕ್ಕಾಗಿ ಟಿಕೆಟ್ ಪಡೆಯಲು ಸರತಿ ಸಾಲಿನಲ್ಲಿ ನಿಂತಿರುವಾಗ ಈ ಘಟನೆ ಸಂಭವಿಸಿದೆ. ಕಾಲ್ತುಳಿತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಆರು ಜನ ಸಾವನ್ನಪ್ಪಿದ್ದಾರೆ.
ಪೊಲೀಸರು ಇಬ್ಬರು ಮಹಿಳಾ ಭಕ್ತರಿಗೆ ಪ್ರಥಮ ಚಿಕಿತ್ಸೆ ನೀಡುತ್ತಿರುವುದನ್ನು ಮತ್ತು ಆಂಬ್ಯುಲೆನ್ಸ್ಗಳಲ್ಲಿ ಗಾಯಾಳುಗಳನ್ನು ಸ್ಥಳಾಂತರಿಸುತ್ತಿರುವುದನ್ನು ತೋರಿಸುವ ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಮೃತರಲ್ಲಿ ಒಬ್ಬರಾದ ಮಲ್ಲಿಕಾ ಅವರ ಪತಿ ಸುದ್ದಿಗಾರರಿಗೆ ಮಾತನಾಡಿ, "ನನ್ನ ಪತ್ನಿ ಮತ್ತು ಇತರರು ವೈಕುಂಠ ದ್ವಾರ ದರ್ಶನ ಟಿಕೆಟ್ಗಳನ್ನು ಪಡೆಯಲು
ಪ್ರಯತ್ನಿಸುತ್ತಿರುವಾಗ, ಕಾಲ್ತುಳಿತ ಸಂಭವಿಸಿ ಅವರು ಸಾವನ್ನಪ್ಪಿದ್ದಾರೆ. ನಾನು ನಮ್ಮ ಸಂಬಂಧಿಕರಿಗೆ ಮಾಹಿತಿ ನೀಡಿದ್ದೇನೆ. ನನ್ನ ಪತ್ನಿಯ ದೇಹವನ್ನು ತರಲು ಈಗಾಗಲೇ ನನ್ನ ಸಂಬಂಧಿಕರು ಅಲ್ಲಿಗೆ ತೆರಳಿದ್ದಾರೆ" ಎಂದು ತಿಳಿಸಿದ್ದಾರೆ.
ಸಿಎಂ ಸಂತಾಪ- ಘಟನೆ ಬಗ್ಗೆ ಮೇಲ್ವಿಚಾರಣೆ
ತಿರುಮಲ ಶ್ರೀವರಿ ವೈಕುಂಠ ದ್ವಾರದಲ್ಲಿ ದರ್ಶನ ಟೋಕನ್ ವಿತರಣೆಯ ಸಮಯದಲ್ಲಿ ತಿರುಪತಿಯ ವಿಷ್ಣು ನಿವಾಸದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಭಕ್ತರು ಸಾವನ್ನಪ್ಪಿದ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳು ಜಿಲ್ಲಾ ಮತ್ತು ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಅಧಿಕಾರಿಗಳೊಂದಿಗೆ ಕಾಲಕಾಲಕ್ಕೆ ಮಾತನಾಡುವ ಮೂಲಕ ಪ್ರಸ್ತುತ ಪರಿಸ್ಥಿತಿಯನ್ನು ತಿಳಿದುಕೊಳ್ಳುತ್ತಿದ್ದಾರೆ.















