ಹೈದರಾಬಾದ್: ತೆಲಂಗಾಣದ ಕಾಮರೆಡ್ಡಿ ಕ್ಷೇತ್ರದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಮತ್ತು ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ರೇವಂತ್ ರೆಡ್ಡಿ ಅವರನ್ನು ಬಿಜೆಪಿ ಅಭ್ಯರ್ಥಿ ಕೆವಿಆರ್ ರೆಡ್ಡಿ ಸೋಲಿಸಿದ್ದಾರೆ. ಮತ ಎಣಿಕೆ ಆರಂಭವಾದಾಗಿನಿಂದಲೂ ಕೆಸಿಆರ್ ಮತ್ತು ರೇವಂತ್ ರೆಡ್ಡಿ ನಡುವೆ ಹಗ್ಗಜಗ್ಗಾಟ ನಡೆಯುತ್ತಿತ್ತು. ಆದರೆ ಫಲಿತಾಂಶದ ವೇಳೆಗೆ ಮೂರನೇ ಶಕ್ತಿಯಾಗಿ ದಿಢೀರನೇ ಉದಯಿಸಿದ ಬಿಜೆಪಿ ಅಭ್ಯರ್ಥಿ ಕಾಟಿಪಲ್ಲಿ ವೆಂಕಟರಮಣ ರೆಡ್ಡಿ, 7 ಸಾವಿರ ಮತಗಳಿಂದ ಜಯಗಳಿಸಿದ್ದಾರೆ. ಹೀಗಾಗಿ ಹಾಲಿ ಮುಖ್ಯಮಂತ್ರಿ ಹಾಗೂ ಬಹುಮತ ಪಡೆದ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲಿ ಸೋಲು ಅನುಭವಿಸಿದ್ದಾರೆ. ಕಾಮರೆಡ್ಡಿ ವಿಧಾನಸಭಾ ಕ್ಷೇತ್ರವೂ ನಗರ ಹಾಗೂ ಗ್ರಾಮೀಣ ಮಿಶ್ರಿತ ಪ್ರದೇಶವನ್ನು ಒಳಗೊಂಡ ಕ್ಷೇತ್ರ ಆಗಿರುವುದರಿಂದ ನಿಜಮಾಬಾದ್ ಜಿಲ್ಲೆಯಲ್ಲಿ ಮಹತ್ವದ ಕ್ಷೇತ್ರವಾಗಿದೆ.
2014ರಲ್ಲಿ ತೆಲಂಗಾಣ ರಾಜ್ಯ ರಚನೆಯಾದಾಗಿನಿಂದಲೂ ಅಧಿಕಾರದಲ್ಲಿದ್ದ ಚಂದ್ರಶೇಖರ ರಾವ್ ನೇತೃತ್ವದ ಪ್ರಾದೇಶಿಕ ಪಕ್ಷ ಭಾರತ ರಾಷ್ಟ್ರ ಸಮಿತಿ (ಈ ಹಿಂದಿನ ತೆಲಂಗಾಣ ರಾಷ್ಟ್ರ ಸಮಿತಿ) ಈ ಬಾರಿ ಸೋಲು ಅನುಭವಿಸಿದೆ. ಈ ಮೂಲಕ ದೇಶದಲ್ಲಿ ಮತ್ತೊಂದು ಪ್ರಾದೇಶಿಕ ಪಕ್ಷ ಮೂಲೆಗುಂಪಾದಂತಾಗಿದೆ. ಬಿಜೆಪಿ
ನೇತೃತ್ವದ ಎನ್ಡಿಎ ಮತ್ತು ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಪರ್ಯಾಯವಾಗಿ ತೃತೀಯ ರಂಗ ರಚನೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಪಕ್ಷ ಕಟ್ಟಲು ಹೊರಟಿದ್ದರು. ಅವರು ಮೊದಲು ಇದ್ದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಹೆಸರನ್ನು ರಾಷ್ಟ್ರ ಮಟ್ಟದ ಕನಸಿನ ಭಾಗವಾಗಿ (BRS) ಎಂದು ಬದಲಿಸಿದ್ದರು.














