ಬಂಟ್ವಾಳ: ಕಲ್ಲಡ್ಕ ಸಮೀಪ ಪಟ್ಟೆಕೋಡಿ ಎಂಬಲ್ಲಿ ಖಚಿತ ವರ್ತಮಾನದ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ಬಂಟ್ವಾಳ ನಗರ ಪೊಲೀಸ್ ನೆರವಿನೊಂದಿಗೆ ಖಾಸಗಿ ಕಟ್ಟಡವೊಂದರಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಸುಮಾರು 25 ಕ್ವಿಂಟಲ್ ಪಡಿತರ ಅಕ್ಕಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಸಂಬಂಧ ಗೋಡೌನ್ ನಡೆಸುತ್ತಿದ್ದ ಸ್ಥಳೀಯ ನಿವಾಸಿಯಾದ ಉಮ್ಮರಬ್ಬ (47) ಹಾಗೂ ಕೆಲಸಗಾರ ರಫೀಕ್ (42) ಎಂಬಿಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಗೋಡೌನ್ ನಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಪಡಿತರ ಬೆಳ್ತಿಗೆ ಅಕ್ಕಿ 21 ಕ್ವಿಂಟಲ್ ಹಾಗೂ 4 ಕೆಜಿಯ ದಾಸ್ತಾನು ಮತ್ತು ಕುಚ್ಚಲಕ್ಕಿಯ 4 ಕ್ವಿಂಟಲ್ ಹಾಗೂ 67 ಕೆಜಿಯ ದಾಸ್ತಾನನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳಾದ ಪ್ರಶಾಂತ್ ಶೆಟ್ಟಿ ನೇತೃತ್ವದಲ್ಲಿ ವಶಕ್ಕೆ ಪಡೆದುಕೊಳ್ಳಲಾಯಿತು ಹಾಗೂ ತೂಕದ ಮಾಪನ, ಮತ್ತು ಅಕ್ಕಿ ಸಾಗಾಟಕ್ಕೆಂದು
ತಂದ ಆಟೊರಿಕ್ಷಾವನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಕ್ಕಿ, ರಿಕ್ಷಾ, ತೂಕ ಯಂತ್ರ ಗೋಣಿ ಚೀಲ ಸೇರಿ ಒಟ್ಟು ಮೌಲ್ಯ ರೂ 8O598 ಎಂದು ಅಂದಾಜಿಸಲಾಗಿದೆ.
ನ್ಯಾಯಬೆಲೆ ಅಂಗಡಿಯಲ್ಲಿ ಪೂರೈಸಬೇಕಾಗಿದ್ದ ಅಕ್ಕಿ ಇಲ್ಲಿಗೆ ಹೇಗೆ ಬಂದು ಎಂಬ ಕುರಿತು ತನಿಖೆ ನಡೆಸಲಾಗುತ್ತಿದ್ದು, ಬೇರೆ ಕಡೆಗೆ ಅಕ್ರಮ ಸಾಗಾಟ ಮಾಡಲು ದಾಸ್ತಾನು ಇರಿಸಲಾಗಿತ್ತೇ ಎಂಬ ಬಗ್ಗೆಯೂ ಪರಿಶೀಲನೆಯನ್ನು ನಡೆಸಲಾಗುತ್ತಿದೆ. ಬಂಟ್ವಾಳ ನಗರ ಠಾಣೆ ಪೊಲೀಸ್ ಸಿಬ್ಬಂದಿ ಸಹಾಯದೊಂದಿಗೆ ದಾಳಿ ಪ್ರಕ್ರಿಯೆ ನಡೆಯಿತು. ಆಹಾರ ಇಲಾಖೆ ದೂರಿನಂತೆ ಪ್ರಕರಣ ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಾಗಿದೆ.














