ಮಂಚಿ - ಕೊಳ್ನಾಡು: 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಮಂತ್ರಣ ಪತ್ರಿಕೆಯ ಬಿಡುಗಡೆ.

Coastal Bulletin
ಮಂಚಿ - ಕೊಳ್ನಾಡು: 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಮಂತ್ರಣ ಪತ್ರಿಕೆಯ ಬಿಡುಗಡೆ.

ಬಂಟ್ವಾಳ: ಗ್ರಾಮ್ಯಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಕನ್ನಡ ಭಾಷೆಯ ಉಳಿವಿಗೆ ಜಾಗೃತಿಗಳಾಗುತ್ತಿವೆ. ವೈವಿಧ್ಯ ಪ್ರಕಾರಗಳಲ್ಲಿ ಕಾರ್ಯಕ್ರಮಗಳು ಸಂಯೋಜನೆಯಾಗುವ ಕಾರಣ ಕನ್ನಡ ಭಾಷೆಯ ಬೆಳವಣಿಗೆ ಸಾಧ್ಯವಾಗಿದೆ. ಸಾಹಿತ್ಯ ಸಮ್ಮೇಳನಗಳ ಮೂಲಕ ಸಾಹಿತಿಗಳನ್ನು ಹಾಗೂ ಸಾಹಿತ್ಯಪ್ರಿಯರನ್ನು ಬೆಸೆಯುವ ಕಾರ್ಯ ನಿರಂತರವಾಗಿದೆ. ಸಾಹಿತ್ಯ ಕೃಷಿಯು ನಿರಂತರವಾಗಿ ಸಾಗುತಲಿದ್ದು ಈ ಬಾರಿಯ ಬಂಟ್ವಾಳ ತಾಲೂಕು ಸಾಹಿತ್ಯ ಸಂಭ್ರಮಕ್ಕೆ ಮಂಚಿ ಪರಿಸರವು ಸಿದ್ಧಗೊಳ್ಳುತ್ತಿದೆ.

2025 ಜನವರಿ 4 ಮತ್ತು 5ರಂದು ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮಂಚಿ - ಕೊಳ್ನಾಡು ಪ್ರೌಢಶಾಲೆಯ ಆವರಣದಲ್ಲಿ ಆಯೋಜನೆಯಾಗಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಶ್ವನಾಥ ಬಂಟ್ವಾಳ ಡಿ.08 ಆದಿತ್ಯವಾರ ಬಿಡುಗಡೆಗೊಳಿಸಿದರು. 


ಬಳಿಕ ಮಾತನಾಡಿ ಹಿರಿಯ ಸಾಹಿತಿಗಳ, ಪ್ರತಿಭಾನ್ವಿತ ಯುವ ಬರಹಗಾರರ, ಸಾಹಿತ್ಯಪ್ರಿಯರೆಲ್ಲರ ಸಾಹಿತ್ಯ ಜಾತ್ರೆಯಾಗಿ 23ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮೆರುಗು ನೀಡಲಿದೆ. ಕನ್ನಡ ಭಾಷೆಯ ಕೃಷಿಗೆ ಇನ್ನಷ್ಟು ಹೊಸ ರೂಪ ಹೊಸ ಚಿಂತನೆಗಳನ್ನು ಹುಟ್ಟು ಹಾಕುವ 'ಸಾಹಿತ್ಯದಿಂದ ಸಾಮರಸ್ಯ' ಎನ್ನುವ ಆಶಯದಡಿ ಈ ಸಮ್ಮೇಳನವು ಜರಗಲಿದೆ." ಎಂದು ತಿಳಿಸಿದರು. 


ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಸತೀಶ್ ಆಳ್ವ ಇರಾ ಬಾಳಿಕೆ ಮಾತನಾಡಿ, "ಗ್ರಾಮಾಂತರ ಮಂಚಿ ಪ್ರದೇಶವು ಹಲವಾರು ಸಾಹಿತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದೆ. ಮಂಚಿಯ ಇಬ್ಬರು ಸಾಹಿತಿಗಳು ಈಗಾಗಲೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿಕೊಂಡಿರುವುದು ಆಯೋಜನೆ ಮಾಡುತ್ತಿರುವ ನಮಗೆ ಹೆಮ್ಮೆಯ ಸಂಗತಿ. ಮಂಚಿ - ಕೊಳ್ನಾಡು ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಯಶಸ್ವಿಯಾಗಿ ಮೂಡಿ ಬರಲಿ" ಎಂದು ತಿಳಿಸಿದರು.


ಹಿರಿಯ ಸಾಹಿತಿ ಹಾಗೂ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಪಡಾರು ಮಹಾಬಲೇಶ್ವರ ಭಟ್ ಉಪಸ್ಥಿತರಿದ್ದು

ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ಹಿರಿಯ ವಿದ್ಯಾರ್ಥಿ ಮಾಧವ ಮಾವೆ, ಅಬ್ದುಲ್ ರಝಾಕ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. 


ಬಂಟ್ವಾಳ ತಾಲೂಕು ಘಟಕದ ಪದಾಧಿಕಾರಿಗಳಾದ ವಿ. ಸು. ಭಟ್, ಅಬೂಬಕ್ಕರ್ ಅಮ್ಮುಂಜೆ, ಮಹಮ್ಮದ್ ಪಾಣೆಮಂಗಳೂರು, ಗಣೇಶ ಪ್ರಸಾದ ಪಾಂಡೆಲು, ಸಮಿತಿಯ ಕೋಶಾಧಿಕಾರಿ ಹಾಜಿ ಸುಲೈಮಾನ್ ಜಿ ಸುರಿಬೈಲು, ಸಂಚಾಲಕರಾದ ಉಮಾನಾಥ ರೈ ಮೇರಾವು, ಬಿ ಎಂ ಅಬ್ಬಾಸ್ ಆಲಿ, ಪುಷ್ಪರಾಜ ಕುಕ್ಕಾಜೆ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಶೀಲ ವಿಟ್ಲ ಉಪಸ್ಥಿತರಿದ್ದರು.


ಸಭಾ ಕಾರ್ಯಕ್ರಮದ ಅಧ್ಯಕ್ಷರ ಅನುಮತಿ ಮೇರೆಗೆ ಸಮ್ಮೇಳನ ಪೂರ್ವಭಾವಿ ಕೆಲಸ ಕಾರ್ಯಗಳು, ರೂಪುರೇಷೆ , ಯೋಜನೆಗಳ ಬಗ್ಗೆ ಬಗ್ಗೆ ಚರ್ಚಿಸಲಾಯಿತು. ಸ್ವಾಗತ ಸಮಿತಿಯ ಸುಮಾರು 60 ಜನ ಸದಸ್ಯರು ಉಪಸ್ಥಿತರಿದ್ದರು.


ಸಮಿತಿಯ ಪ್ರಧಾನ ಸಂಯೋಜಕರಾದ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಎಂ.ಡಿ ಮಂಚಿ ವಂದಿಸಿದರು. ಬಂಟ್ವಾಳ ತಾಲೂಕು ಘಟಕದ ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

ಪುಸ್ತಕ ಮತ್ತು ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೆ ಆಹ್ವಾನ

ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮತ್ತು ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಆಸಕ್ತರು ಸಮಿತಿ ಸಂಚಾಲಕರರಾದ ದಿನೇಶ್ ಎನ್ ತುಂಬೆ 9844619763 ಸಂಪರ್ಕಿಸಬಹುದು ಎಂದು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯಪರಿಷತ್ತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment