ಬಂಟ್ವಾಳ: ಫರಂಗಿಪೇಟೆ ಸೇವಾಂಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಸೇವಾಂಜಲಿ ಸಭಾಗೃಹದಲ್ಲಿ ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಆಹಾರ ದವಸ,ಧಾನ್ಯ ಮುಂತಾದ ಪೌಷ್ಠಿಕ ಆಹಾರದ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ರೋಟರಿ ಜಿಲ್ಲಾ ನಿಕಟಪೂರ್ವ ಗವರ್ನರ್ ಪ್ರಕಾಶ್ ಕಾರಂತ್ ಮಾತನಾಡಿ, ನಿಕ್ಷಯಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನವು ಬದ್ದತೆ ಹಾಗೂ ದೀಕ್ಷೆ ತೊಟ್ಟಂತೆ ಅರ್ಹ ಕ್ಷಯ ರೋಗಿಗಳಿಗೆ ಒಂದು ವರ್ಷದಿಂದ ಪೌಷ್ಠಿಕ ಆಹಾರದ ಕಿಟ್ ವಿತರಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನೀಯ. ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಸರಕಾರದ ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಕೃಷ್ಣ ಕುಮಾರ್ ಪೂಂಜ ಅವರ ನೇತೃತ್ವದಲ್ಲಿ ಸೇವಾಂಜಲಿ ಪ್ರತಿಷ್ಠಾನ ನಿರಂತರವಾಗಿ ಮಾಡುತ್ತಿದೆ. ಧಾರ್ಮಿಕ,
ಸಾಮಾಜಿಕ,ಸಾಂಸ್ಕೃತಿಕ,ಶೈಕ್ಷಣಿಕ,ಆರೋಗ್ಯ ಸೇವಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ಇತರ ಸಂಘ ಸಂಸ್ಥೆಗಳಿಗೆ ಆದರ್ಶ ಎಂದು ಹೇಳಿದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಕ್ಷಯರೋಗಿಗಳಿಗೆ ನೀಡುವ ಆಹಾರವನ್ನು ಅವರೇ ಸೇವಿಸಿ ಆರೋಗ್ಯವನ್ನು ಉತ್ತಮಗೊಳಿಸಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಪ್ರಮುಖರಾದ ಸುಕೇಶ್ ಶೆಟ್ಟಿ ತೇವು,ಕೇಶವ ದೋಟ,ಇಂಜಿನಿಯರ್ ಸಮೀರ್ ಕುಮಾರ್, ಸುರೇಶ್ ರೈ ಪೆಲಪಾಡಿ,ನಾರಾಯಣ ಬೆಳ್ಚಡ ಬಡ್ಡೂರು, ಕೃಷ್ಣ ತುಪ್ಪೆಕಲ್ಲು, ಪದ್ಮನಾಭ ಕಿದೆಬೆಟ್ಟು, ಚಂದ್ರಹಾಸ ಕಡೆಗೋಳಿ, ದಿನೇಶ್ ಶೆಟ್ಟಿ ಕೊಟ್ಟಿಂಜ,ಪ್ರಶಾಂತ್ ತುಂಬೆ, ಮಧುರಾಜ್ ಶೆಟ್ಟಿ ಉಪಸ್ಥಿತರಿದ್ದರು.















