ಬಂಟ್ವಾಳ :ರಾಜ್ಯದ ಕರಾವಳಿ ಹಾಗೂ ತುಳುನಾಡಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ಬಹುತೇಕ ದೇವಸ್ಥಾನಗಳು ಹಾಗೂ ದೈವಸ್ಥಾನಗಳಲ್ಲಿ ನಡೆಯುವ ಜಾತ್ರಾ ಮಹೋತ್ಸವಗಳು ಕೋಳಿ ಕುಂಟ ಹಾಕುವ ಮೂಲಕ ಪ್ರಾರಂಭವಾಗುವುದು ತುಳುನಾಡಿನ ಧಾರ್ಮಿಕ ರೂಢಿಯಾಗಿರುತ್ರದೆ.
ಈ ಹಿನ್ನೆಲೆಯ ಕೋಳಿ ಕುಂಟದಿಂದ ಪ್ರಾರಂಭಗೊಂಡ ಧಾರ್ಮಿಕ ಕಾರ್ಯಕ್ರಮಗಳು ಕೊನೆಗೊಂಡ ನಂತರ ಊರ, ಪರವೂರ ಭಕ್ತಾಧಿಗಳು ಮತ್ತು ಜಾತ್ರೆಗೆ ಬಂದಿರುವ ಪರವೂರ ನೆಂಟರೆಲ್ಲ ಸೇರಿಕೊಂಡು ದೇವಸ್ಥಾನ ಅಥವಾ ದೈವಸ್ಥಾನಗಳ ಹತ್ತಿರದಲ್ಲಿ ಕೋಳಿ ಅಂಕಕ್ಕೆ ಗೊತ್ತುಪಡಿಸಿದ ಸ್ಥಳದಲ್ಲಿ ಸಾಂಪ್ರದಾಯಿಕವಾಗಿ ಕೋಳಿ ಅಂಕವನ್ನು ನಡೆಸುಕೊಂಡು ಬಂದು ಜಾತ್ರೆಯ ಸಂದರ್ಭಗಳಲ್ಲಿ ಸಂತೋಷದಿಂದ ಭಾಗಿಯಾಗುತ್ತಿರುವುದು ತುಳುನಾಡ ಜಿಲ್ಲೆಯ ಭಕ್ತರ ಧಾರ್ಮಿಕ ಕಟ್ಟು ಪಾಡಗಿರುತ್ತದೆ.ಕಾನೂನುನಲ್ಲಿ ಅವಕಾಶ ಇಲ್ಲದಿದ್ದರೂ ಧಾರ್ಮಿಕ ನಂಬಿಕೆಯ ವಿಚಾರದಲ್ಲಿ ಯಥಾವತ್ತಾಗಿ ಇಷ್ಟರವರೆಗೂ ನಡೆದುಕೊಂಡು ಬಂದಿರುವ ಕೋಳಿ ಅಂಕಗಳಿಗೆ
ಇದೀಗ ದ. ಕನ್ನಡ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಂದ ತಡೆಬಿದ್ದಿದ್ದು ಒಂದು ವರ್ಷದಿಂದ ಕೋಳಿ ಅಂಕಗಳು ನಿಂತಿರುವುದುರಿಂದ ಜಿಲ್ಲೆಯ ಬಹುತೇಕ ಧಾರ್ಮಿಕ ನಂಬಿಕೆಯುಳ್ಳ ಜನರ ಭಾವನೆಗಳಿಗೆ ತೊಂದರೆಯಾಗಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಧಾರ್ಮಿಕತೆಯ ನಂಟು ಹೊಂದಿರುವ ಕೋಳಿ ಅಂಕಗಳನ್ನು ಜೂಜುರಹಿತವಾಗಿ ಮತ್ತು ಕಾನೂನಾತ್ಮಕವಾಗಿ ನಡೆಸಲು ಕಾನೂನು ರೂಪಿಸಿಕೊಂಡು ವಿಶೇಷ ಆದೇಶ ಹೊರಡಿಸುವಂತೆ ಕರ್ನಾಟಕ ಸರಕಾರದ ಮಾನ್ಯ ಗೃಹ ಸಚಿವರಿಗೆ ಬಂಟ್ವಾಳ ತಾ ಪಂ ಮಾಜಿ ಸದಸ್ಯ ಪ್ರಭಾಕರ ಪ್ರಭು ಲಿಖಿತ ಮನವಿ ಸಲ್ಲಿಸಿದ್ದಾರೆ.















