ಮೂಡುಬಿದಿರೆ: ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ತಾನು ಹಿಂದೂ, ನಾವು ಮುಸ್ಲಿಂ, ಕ್ರಿಶ್ಚನ್ ಎಂಬ ಬೇಧ ಭಾವ ಇರಬಾರದು. ಜಾತಿ, ಆಚರಣೆ, ಪರಂಪರೆ ಹಾಗೂ ಧರ್ಮದ ಬಗ್ಗೆ ಪ್ರಶ್ನಿಸಿದಾಗ ಎಲ್ಲರ ಉತ್ತರ ಭಾರತೀಯತೆ ಆಗಿರಲಿ. ಶಿಕ್ಷಣಕ್ಕಾಗಿ ಬರುವಾಗ ಸಾಂಪ್ರದಾಯಿಕ ಆಚರಣೆಗಳನ್ನು ಶಾಲೆಯ ಆವರಣಕ್ಕೆ ತರುವುದು ಸರಿಯಲ್ಲ.ಆಯಾಯ ಪ್ರಾದೇಶಿಕ ಪರಂಪರೆಗೆ ಒಗ್ಗಿಕೊಳ್ಳಬೇಕಾಗಿರುವುದು ನಮ್ಮ ಧರ್ಮ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಾಲ್ಸಾರ್ ಹೇಳಿದರು.
ಬೆಳುವಾಯಿ ಬ್ಲಾಸಮ್ ಪ್ರೌಢಶಾಲೆಯಲ್ಲಿ - ಕ್ಲಸ್ಟರ್ ಮಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮೂಹ ಸಂಪನ್ಮೂಲ ವತಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ' ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳ ಮನದೊಳಗೆ ವಿಷ ಬೀಜವನ್ನು ಬಿತ್ತುವುದು ಹಾಗೂ ರಾಷ್ಟ್ರೀಯತೆಯನ್ನು ದಮನಿಸಿ ಕೆಡುಕನ್ನು ವಿಜೃಂಭಿಸುವ ಕೆಲಸ ಸಲ್ಲದು. ಭಾರತಮಾತೆಗೆ ಕೇಡನ್ನು ಬಯಸುವಂತಹ, ಸೈನ್ಯದ ವಿರುದ್ಧ ಹಾಗೂ ನಮ್ಮ ಸಂಸ್ಕೃತಿಯ ವಿರುದ್ಧ ಘೋಷಣೆ ಕೂಗುವಂತಹ ಮನಸ್ಥಿತಿಯನ್ನು ಹೊಂದದೆ ವಿದ್ಯಾರ್ಜನೆಯ ಮೂಲ ಉದ್ದೇಶವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ದುಶ್ಚಟ ಮುಕ್ತ ಭಾರತವಾಗುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು .ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿಷ
ಪದಾರ್ಥಗಳ ಸೇವನೆಗೆ ಬಲಿಯಾಗದೆ ಅಮೃತವನ್ನು ಕುಡಿಯುವಂತಾಗಬೇಕು ಎಂದರು.
ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾರಂಭಕ್ಕೂ ಮೊದಲು ನಡೆದ ಮೆರವಣಿಗೆಗೆ ಬೆಳುವಾಯಿ ಗ್ರಾ.ಪಂ.ಅಧ್ಯಕ್ಷೆ ಸುಶೀಲಾ ಚಾಲನೆ ನೀಡಿದರು. ಬಿ.ಆರ್.ಟಿ ಸುಶೀಲಾ ಹೆಗ್ಡೆ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಪ್ರಸನ್ನ ಶೆಣೈ ಸ್ವಾಗತಿಸಿದರು. ಶಿಕ್ಷಕಿ ಸೀಮಾ ಕಾರ್ಯಕ್ರಮ ನಿರೂಪಿಸಿ ಶಾಲಾ ಸಂಚಾಲಕ ಸೈಮನ್ ಮಸ್ಕರೇನಸ್ ಧನ್ಯವಾದಗೈದರು. ಸುಮಾರು 400 ವಿದ್ಯಾರ್ಥಿಗಳು ಭಾಗವಹಿಸಿದ ಈ ಕಾರ್ಯಕ್ರಮವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತವನ್ನಾಗಿ ಯೋಜಿಸಲಾಗಿತ್ತು.
ತುಳು ಲಿಪಿ ಪ್ರಾಚೀನವಾದುದು. ವಿದ್ಯಾರ್ಥಿಗಳಲ್ಲಿ ತುಳು ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಶಾಲೆಯಲ್ಲಿ ಒಂದು ತರಗತಿಯನ್ನು ಮೀಸಲಿಡುವಂತೆ ಶಾಲಾ ಮುಖ್ಯಸ್ಥರಲ್ಲಿ ಈ ಸಂದರ್ಭದಲ್ಲಿ ಕತ್ತಾಲ್ ಸರ್ ವಿನಂತಿಸಿದರು.
















