ಬಂಟ್ವಾಳ : ರಾತ್ರಿ ಸುಮಾರು 12ಗಂಟೆ 25 ನಿಮಿಷದ ಸಮಯ ರಂಗಸ್ಥಳದಲ್ಲಿ ಯಕ್ಷಗಾನದ ಪಾತ್ರ ಮುಗಿಸಿ ವೇಷ ಕಳಚಿ ಚೌಕಿಯಲ್ಲಿ ಇನ್ನೇನು ಬಣ್ಣ ತೆಗೆಯುತ್ತಿದ್ದ ವೇಳೆ ತಮ್ಮ 42 ವರ್ಷಗಳ ತಿರುಗಾಟ ನಿರ್ವಹಿಸಿದ ಹಿರಿಯ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಹೃದಯಾಘಾತಕ್ಕೊಳಗಾಗಿ ಸಾವಿಗೀಡಾಗಿದ್ದಾರೆ
59ರ ಹರೆಯದ ಗಂಗಾಧರ ಪುತ್ತೂರು ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ ಹಲವಾರು ವರ್ಷಗಳಿಂದ ತಿರುಗಾಟ ಸೇವೆ ನೀಡಿದ್ದಾರೆ. ಕೋಟ ಗಾಂಧಿ ಮೈದಾನದಲ್ಲಿ ಮೇ 1ರಂದು ಬುಧವಾರ ನಡೆದ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಯಕ್ಷಗಾನದಲ್ಲಿ ಕುಕ್ಕಿತ್ತಾಯನ ವೇಷ ನಿರ್ವಹಿಸಿ, ಗಂಗಾಧರ್ ಚೌಕಿಗೆ ಮರಳಿದ್ದರು. ಚೌಕಿಯಲ್ಲಿ ತಾವು ಧರಿಸಿದ್ದ ಕಿರೀಟ ಆಭರಣಗಳನ್ನು ತೆಗೆದಿಟ್ಟು ಮುಖದ ಬಣ್ಣ ತೆಗೆಯುತ್ತಿರುವಾಗ ಅವರಿಗೆ ತೀವ್ರ ಹೃದಯಾಘಾತವಾಗಿದೆ.
1964ರಲ್ಲಿ ಪುತ್ತೂರಿನ ಸೇಡಿಯಾಪುವಿನಲ್ಲಿ ನಾರಾಯಣ ಮಯ್ಯ ಮತ್ತು ಲಕ್ಷ್ಮಿ ದಂಪತಿಯ ಮಗನಾಗಿ ಜನಿಸಿದ ಗಂಗಾಧರ ಏಳನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದರು. ನಂತರ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ ಅವರಲ್ಲಿ ನಾಟ್ಯಾಭ್ಯಾಸ ಕಲಿತರು.18ನೇ ವಯಸ್ಸಿನಿಂದ ಮೇಳ ತಿರುಗಾಟ ಆರಂಭಿಸಿದ ಗಂಗಾಧರ, ಸ್ತ್ರೀ ವೇಷ, ಪುಂಡು ವೇಷ, ರಾಜ ವೇಷ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದರು.ಅಸಂಖ್ಯಾ ಅಭಿಮಾನಿ ವರ್ಗವನ್ನು ಅಗಲಿದ್ದಾರೆ.